ಹೊಸಶಕೆ ನ್ಯೂಸ್-ಯಲಬುರ್ಗಾ: ನಮ್ಮ ಸುತ್ತಲಿನ ಪ್ರದೇಶವನ್ನು ಹಸನಾಗಿಡುವಲ್ಲಿ ಸ್ವಚ್ಛತಾ ರೂವಾರಿಗಳಾದ ಪೌರಕಾರ್ಮಿಕರ ಕೊಡುಗೆ ಅಪಾರವಾದುದ್ದು, ಪೌರಕಾರ್ಮಿಕರ ನಿಸ್ವಾರ್ಥ ಸೇವೆಯನ್ನು ಗೌರವಿಸೋಣ ಎಂದು ಮುಖ್ಯಾಧಿಕಾರಿ ನಾಗೇಶ್ ಹೇಳಿದರು
ಪಟ್ಟಣದಲ್ಲಿ ಮಂಗಳವಾರದಂದು ಪೌರಾಡಳಿತ ನಿರ್ದೇಶನಲಯ ಬೆಂಗಳೂರು, ಜಿಲ್ಲಾ ನಗರ ಅಭಿವೃದ್ಧಿ ಕೋಶ ಕೊಪ್ಪಳ ಹಾಗೂ ಪಟ್ಟಣ ಪಂಚಾಯತ ಆಶ್ರಯದಲ್ಲಿ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಚ್ಛ ಹಾಗೂ ಸ್ವಾಸ್ಥ್ಯ ಸಮಾಜ ನಿರ್ಮಿಸಲು ದುಡಿಯುತ್ತಿರುವ ಪೌರ ಕಾರ್ಮಿಕರ ಶ್ರಮದಿಂದ ನಗರ-ಸ್ಥಳೀಯ ಸಂಸ್ಥೆಗಳಲ್ಲಿ ಆರೋಗ್ಯ ಪೂರ್ಣ ಸ್ವಚ್ಛತೆ ಕಾಣಲು ಸಾಧ್ಯವಾಗಿದೆ, ತಮ್ಮ ಆರೋಗ್ಯ, ಕುಟುಂಬನ್ನು ಲೆಕ್ಕಿಸಿದೆ ಸಾರ್ವಜಿಕರ ಒಳಿತಿಗಾಗಿ, ಪಟ್ಟಣ, ನಗರಗಳಲ್ಲಿ ದಿನನಿತ್ಯ ಸ್ವಚ್ಛತಾ ಕಾರ್ಯ ದೇವರ ಕೆಲಸವಾಗಿದೆ ಎಂದರು.
ಸ್ವಚ್ಛತೆ ಮಾಡುವ ಪೌರ ಕಾರ್ಮಿಕರು ಆರೋಗ್ಯದಿಂದ ಇದ್ದರೆ ಮಾತ್ರ ಪಟ್ಟಣ ಹಾಗೂ ಅವರ ಕುಟುಂಬ ಸುಂದರವಾಗಿ ಇರಲು ಸಾಧ್ಯವಾಗುತ್ತದೆ. ಪ್ರತಿ ವಾರಕ್ಕೆ ಒಂದು ಸಾರಿ ಪೌರಕಾರ್ಮಿಕರು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಕೊಳ್ಳಬೇಕು, ಸರ್ಕಾರದಿಂದ ಪೌರಕಾರ್ಮಿಕರಿಗಾಗಿ ಹಲವು ಸೌಲಭ್ಯಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು, ಪಟ್ಟಣ, ನಗರಗಳ ಜನರ ಸುರಕ್ಷತೆ, ಮತ್ತು ಆರೋಗ್ಯಕ್ಕಾಗಿ ಶ್ರಮಿಸುವ ಪೌರ ಕಾರ್ಮಿಕರನ್ನು ನಾವೇಲ್ಲರೂ ಗೌರವಿಸಬೇಕು ಎಂದು ಹೇಳಿದರು.
ಪಟ್ಟಣ ಪಂಚಾಯತ ಅಧ್ಯಕ್ಷ ಅಂದಯ್ಯ ಕಳ್ಳಿಮಠ, ಸದಸ್ಯರಾದ ವಸಂತಕುಮಾರ ಭಾವಿಮನಿ ಮಾತನಾಡಿ,ಪಟ್ಟಣ ಸ್ವಚ್ಛವಾಗಿರಬೇಕೆಂದರೆ ಅದು ಪೌರ ಕಾರ್ಮಿಕರಿಂದ ಮಾತ್ರ ಸಾಧ್ಯ. ಚಾಚೂತಪ್ಪದೇ ತಮ್ಮ ಕಾಯಕ ನಿಷ್ಠೆಯಿಂದ ಹಲವಾರು ವರ್ಷಗಳಿಂದಲೂ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇಂತಹ ಪೌರ ಕಾರ್ಮಿಕರು ನಿಮ್ಮ ಮನೆಗಳ ಬಳಿಯೂ ಬಂದು ಕಸ ವಿಲೇವಾರಿ ಮಾಡಿಕೊಂಡು ಹೋಗುತ್ತಾರೆ. ಅಂತಹವರನ್ನು ನಿಂದಿಸಬಾರದು.ಪೌರ ಕಾರ್ಮಿಕರು ನಗರವನ್ನು ಸ್ವಚ್ಛವಾಗಿಸುವ ಜೊತೆಗೆ ಸೌಂದರೀಕರಣದ ಭಾಗವಾಗಿದ್ದು ಅವರನ್ನು ನಮ್ಮವರೆಂದು ಭಾವಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತಿಯ ಸದ್ಯರಾದ ಅಮರೇಶ್ ಹುಬ್ಬಳ್ಲೀ, ಅಶೋಕ ಅರಕೇರಿ, ಹನಮಂತಪ್ಪ ಬಜೆಂತ್ರಿ, ಅಭಿಯಂತರರಾದ ಉಮೇಶ ಬೇಲಿ, ಅಧಿಕಾರಿಗಳಾದ ಸುಮಾ ಕಂಚಿ, ರಾಮಣ್ಣ, ವನರಾಜ, ಸಿಬ್ಬಂದಿಗಳಾದ ರವಿಕುಮಾರ ಭಾಸ್ಕರ್, ಶಿವಕುಮಾರ ಸರಗಣಾಚಾರ್, ರಮೇಶ್ ಬೇಲೇರಿ, ಸುಭಾಷ್ ಚಂದ್ರ ಭಾವಿಮನಿ, ವೆಂಕಣ್ಣ ಜೋಶಿ, ರವಿಕುಮಾರ, ಮಲ್ಲಪ್ಪ ಭೂತೆ, ರೇಣುಕಪ್ಪ ದಫೇದಾರ್, ಮುಖಂಡರಾದ ಈರಪ್ಪ ಬಣಕಾರ್, ಕಳಕಪ್ಪ ತಳವಾರ್, ಛತ್ರಪ್ಪ ಛಲವಾದಿ, ಡಿಕೆ ಪರಶುರಾಮ, ಶಶಿಧರ ಹೊಸಮನಿ, ಚಂದ್ರಶೇಖರ್ ಎಂ, ಸೇರಿದಂತೆ ಇತರರು ಪಾಲ್ಗೊಂಡಿದ್ದರು.
