ಡಿಸೆಂಬರ್ 10ರ ವರೆಗೆ ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ ಶುಚಿತ್ವ ಕುರಿತು ಜಾಗೃತಿ ಕಾರ್ಯಕ್ರಮ
ಹೊಸಶಕೆ ನ್ಯೂಸ್-ಕೊಪ್ಪಳ: ವಿಶ್ವ ಶೌಚಾಲಯ ದಿನಾಚರಣೆಯ ನಿಮಿತ್ತ ಡಿಸೆಂಬರ್ 10ರ ವರೆಗೆ ಹಮ್ಮಿಕೊಳ್ಳಲಾದ “ನಮ್ಮ ಶೌಚಾಲಯ ನಮ್ಮ ಭವಿಷ್ಯ” ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.
ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ ನೈರ್ಮಲ್ಯ ಶುಚಿತ್ವ ಕುರಿತು ಜಾಗೃತಿ ಮೂಡಿಸಿ ಶೌಚಾಲಯಗಳನ್ನು ನಿರಂತರವಾಗಿ ಬಳಸುವಂತೆ ಪ್ರೇರೇಪಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನಾಚರಣೆಯು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯ ಸ್ಥಾನಮಾನವನ್ನು ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಈ ನಿಟ್ಟಿನಲ್ಲಿ ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ವಿಶ್ವ ಶೌಚಾಲಯ ದಿನಾಚರಣೆಯ ಪ್ರಯುಕ್ತ “19ನೇ ನವೆಂಬರ್ 2025 ರಿಂದ 10ನೇ ಡಿಸೆಂಬರ್ 2025ರ” ವರೆಗೆ “ನಮ್ಮ ಶೌಚಾಲಯ-ನಮ್ಮ ಭವಿಷ್ಯ” ಎಂಬ ಶೀರ್ಷಿಕೆಯಡಿ ವಿಶೇಷ ಅಭಿಯಾನವನ್ನು ಆಯೋಜಿಸಲು ನಿರ್ದೇಶನ ನೀಡಿರುವ ಪ್ರಯುಕ್ತ ಈ ಅಭಿಯಾನವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ.
ಈ ಹಿನ್ನಲೆಯಲ್ಲಿ ಈ ಅಭಿಯಾನವು ಆರೋಗ್ಯ, ಘನತೆ ಮತ್ತು ಸಾಮಾಜಿಕ ಸಮೃದ್ಧಿಗಾಗಿ ನೈರ್ಮಲ್ಯ ಮತ್ತು ಸ್ವಚ್ಛತೆಯ ಪ್ರಾಮುಖ್ಯತೆಯ ಮೇಲೆ ಮಾತ್ರವಲ್ಲದೆ, ವೈಯಕ್ತಿಕ ಮನೆ ಶೌಚಾಲಯಗಳು ಮತ್ತು ಸಮುದಾಯದ ನೈರ್ಮಲ್ಯ ಸಂಕೀರ್ಣಗಳು ಎರಡಕ್ಕೂ ಸಂಬಂಧಿಸಿದಂತೆ, ಕಾರ್ಯಕ್ಷಮತೆಯ ಮೌಲ್ಯಮಾಪನ ಮತ್ತು ಗ್ರಾಮೀಣ ಶೌಚಾಲಯಗಳ ಸೌಂದರ್ಯ ವರ್ಧನೆಯಂತಹ ಅಂಶಗಳಿಗೂ ಒತ್ತು ನೀಡುತ್ತದೆ.
ಈ ಅವಧಿಯಲ್ಲಿ ಗ್ರಾಮ ಪಂಚಾಯತಿಗಳು, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಒಗ್ಗೂಡಿ ಸಮುದಾಯ ಶೌಚಾಲಯ ಸಂಕೀರ್ಣಗಳ ಕಾರ್ಯಕ್ಷಮತೆ, ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡಲು ಮತ್ತು ಹೆಚ್ಚಿಸಲು ಕ್ರಮವಹಿಸುವುದರ ಜೊತೆಗೆ ಜಿಲ್ಲೆ ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಗಳ ಮಟ್ಟದಲ್ಲಿ ವಿವಿಧ ಜನ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಂಡು ಗ್ರಾಮೀಣ ಸಮುದಾಯದಲ್ಲಿ ಶೌಚಾಲಯ ಬಳಕೆ ಮತ್ತು ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸಲು ಕ್ರಮವಹಿಸಲು ತಿಳಿಸಿದೆ.
ಮುಂದುವರೆದು, ಸಮುದಾಯದ ಸ್ವಚ್ಛ ಆರೋಗ್ಯಕರ ಮತ್ತು ಸಮ್ಮದ ಭವಿಷ್ಯಕ್ಕಾಗಿ ಸಂಪೂರ್ಣ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು, ಗಣ್ಯ ವ್ಯಕ್ತಿಗಳು, ಹಿರಿಯ ನಾಗರಿಕರು, ಮಕ್ಕಳು, ಯುವಕರು, ಸ್ವ-ಸಹಾಯ ಗುಂಪುಗಳು (SHGs) ಇತ್ಯಾದಿಗಳನ್ನು ಒಳಗೊಂಡಿರುವ ಜನರ ಸಹಭಾಗಿತ್ವ (Jan Bhagidari) ಮೂಲಕ ಸಮುದಾಯಗಳಲ್ಲಿ ಕೇಂದ್ರೀಕೃತ ಜಾಗೃತಿ ಮೂಡಿಸುವ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಮವಹಿಸುವುದು.
ವಿಶ್ವ ಶೌಚಾಲಯ ದಿನಾಚರಣೆಯ ಪ್ರಯುಕ್ತ 19ನೇ ನವೆಂಬರ್ 2025 ರಿಂದ 10ನೇ ಡಿಸೆಂಬರ್ 2025ರವರೆಗೆ “ನಮ್ಮ “ಶೌಚಾಲಯ-ನಮ್ಮ ಭವಿಷ್ಯ” ಅಭಿಯಾನವನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಯಶಸ್ವಿಯಾಗಿ ಹಮ್ಮಿಕೊಂಡು ಅದರ ವರದಿಯನ್ನು ಕೇಂದ್ರ ಜಲಶಕ್ತಿ ಸಚಿವಾಲಯದ ಪ್ರೋಟಲ್ನಲ್ಲಿ ಆರೋಹಿಸಲು ಕ್ರಮವಹಿಸಿ ಎಂದು ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿ.ಪಂ ಸಿಇಒ ಅವರು ಸೂಚನೆ ನೀಡಿದ್ದಾರೆ.
ಈ ಅಭಿಯಾನದಲ್ಲಿ ಗ್ರಾಮ ಪಂಚಾಯತಿಯ ಜೊತೆಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು, ಯುವಕರು, ಹಿರಿಯರು, ಮಹಿಳೆಯರು, ಸ್ವ-ಸಹಾಯ ಸಂಘದ ಸದಸ್ಯರುಗಳು, ಶಾಲಾ & ಕಾಲೇಜಗಳು, ಅವರಿವರೆನ್ನದೆ ಎಲ್ಲ ಸಾರ್ವಜನಿಕರು ತಮ್ಮ ಪರಿವಾರದೊಂದಿಗೆ ಈ ಅಭಿಯಾನದಲ್ಲಿ ಭಾಗವಹಿಸಿ ಈ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿಸಲು ಭಾಗಿದಾರರಾಗಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಅವರು ತಿಳಿಸಿದ್ದಾರೆ.
