ಹೊಸಶಕೆ ನ್ಯೂಸ್-ಗಂಗಾವತಿ :
ಭಾರತೀಯ ಕ್ರೀಡಾ ಪ್ರಾಧಿಕಾರ, ಯುವ ವ್ಯವಹಾರಗಳ ಕ್ರೀಡಾ ಸಚಿವಾಲಯ ಭಾರತ ಸರ್ಕಾರ ಮತ್ತು ವುಶೂ ಅಸೋಸಿಯೇಷನ್ ಆಫ್ ಇಂಡಿಯಾ ಇವರ ನೇತೃತ್ವದಲ್ಲಿ ಛತ್ತೀಸಗಡ ರಾಜ್ಯದ ಬಿಲಾಸಪೂರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರೀಯ ಖೇಲೋ ಇಂಡಿಯಾ ಮಹಿಳೆಯರ ಸೀನಿಯರ್ ವುಶೂ ಲೀಗ್ ಸ್ಪರ್ಧೆಗೆ ಬೇತಲ್ ಮಹಿಳಾ ಪದವಿ ಮಹಾವಿದ್ಯಾಲಯದ ಕ್ರೀಡಾಪಟುಗಳಾದ ಕು.ಐಶ್ವರ್ಯ ಮತ್ತು ಕು.ಆಶಾ ಆಯ್ಕೆಯಾಗಿದ್ದಾರೆ. ಕೇಂದ್ರ ಸರ್ಕಾರದ ASMITA (Achieving Sports Milestone by Inspiring Women through Action) ಎಂಬ ಧ್ಯೇಯದಡಿಯಲ್ಲಿ ಮಾರ್ಚ್ 20 ರಿಂದ 23 ರ ವರೆಗೆ ನಡೆಯಲಿರುವ ಈ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಕಿಷ್ಕಿಂದ ನಾಡಿನ ಪ್ರಥಮ ವುಶೂ ಕ್ರೀಡಾಪಟುಗಳಾಗಿ ದಕ್ಷಿಣ ಭಾರತದ ಪರವಾಗಿ ಸಂಗಾಪುರ ಗ್ರಾಮದ ಸಾವಿತ್ರಿ ಗಂ.ಶ್ರೀನಿವಾಸ್ ಅವರ ಪುತ್ರಿ ಕು.ಐಶ್ವರ್ಯ (-45 ಕೆಜಿ) ಮತ್ತು ಹಿರೇಜಂತಕಲ್ನ ಸಾವಿತ್ರಿ ಗಂ.ಲಕ್ಷ್ಮಣ ಅವರ ಪುತ್ರಿ ಕು.ಆಶಾ (-52 ಕೆಜಿ) ಸೀನಿಯರ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.
ಈ ಕ್ರೀಡಾಕೂಟದಲ್ಲಿ ದೇಶದ ನಾಲ್ಕು ವಲಯಗಳಾದ ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಉತ್ತರ ಭಾರತ ವಲಯಗಳ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ಆಟಗಾರರೇ ಮಾತ್ರ ಭಾಗವಹಿಸುವ ಅವಕಾಶ ಪಡೆದಿದ್ದಾರೆ.
“ಕ್ರೀಡೆ ಜೀವನದ ಅವಿಭಾಜ್ಯ ಅಂಗ. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ಗ್ರಾಮೀಣ ಭಾಗದ ಮಕ್ಕಳಿಗೆ ಈ ಅವಕಾಶ ಲಭ್ಯವಾಗಿರುವುದು ನಿಜಕ್ಕೂ ಪ್ರಶಂಸನೀಯ. ಪರಿಶ್ರಮದ ಪ್ರತಿಫಲ. ಅವರು ಇನ್ನಷ್ಟು ಅಭ್ಯಾಸ ಮಾಡಿ, ಜಿಲ್ಲೆ ಹಾಗೂ ರಾಜ್ಯದ ಕೀರ್ತಿಯನ್ನು ಹೆಚ್ಚಿಸಲಿ” ಎಂದು ಬೇತಲ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿ ಹೇಮಾ ಸುಧಾಕರ್ ಅವರು ಶುಭಕೋರಿದ್ದಾರೆ.
ಬೇತಲ್ ಶಿಕ್ಷಣ ಸಂಸ್ಥೆಯ ಆಡಳಿತ ಅಧಿಕಾರಿಗಳಾದ ಹೇಮಾ ಸುಧಾಕರ್, ಅಧ್ಯಕ್ಷರಾದ ರಾಜು ಸುಧಾಕರ್, ಕಾರ್ಯದರ್ಶಿಗಳು ಮತ್ತು ಬೇತಲ್ ಮಹಿಳಾ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತ ರಾಜು, ಮುಖ್ಯ ತರಬೇತಿದಾರರಾದ ಬಾಬುಸಾಬ ಹಾಗೂ ಇತರ ಗಣ್ಯರು ಕ್ರೀಡಾಪಟುಗಳಿಗೆ ಶುಭಹಾರೈಸಿರುವರು
==ಹೆಣ್ಣುಮಕ್ಕಳ ಸಾಧನೆಗೆ ಇದು ಅಮೃತಹಾದಿಯಾಗಲಿದೆ. ಮತ್ತು ಕೇಂದ್ರ ಸರ್ಕಾರದ ASMITA ಧ್ಯೇಯದಡಿಯಲ್ಲಿ ಈ ಅವಕಾಶ ದೊರೆಕಿರುವುದು ಮಹಿಳಾ ಕ್ರೀಡಾಪಟುಗಳ ಪ್ರೋತ್ಸಾಹಕ್ಕೆ ಹೊಸಬಾಗಿಲು ತರೆದಂತಾಗಿದೆ. ಇಂತಹ ಪ್ರತಿಭಾವಂತ ಕ್ರೀಡಾಪಟುಗಳಿಗೆ ಇನ್ನೈ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ಉನ್ನತ ಮಟ್ಟಕ್ಕೆ ಬೆಳೆಯಲು ಸಹಾಯವಾಗುತ್ತದೆ : ಬಾಬುಸಾಬ ಮುಖ್ಯ ತರಬೇತಿದಾರ. ==