ಹೊಸಶಕೆ ನ್ಯೂಸ್-ಗಂಗಾವತಿ : ಶಾಲಾ ಶಿಕ್ಷಕಿಯೊಬ್ಬರ ಮೇಲೆ ವಿದ್ಯುತ್ ತಂತಿ ಬಿದ್ದು ಸ್ಥಳದಲ್ಲಿಯೇ ಶಿಕ್ಷಕಿ ಮೃತಪಟ್ಟಿರುವ ಘಟನೆ ಗುರುವಾರ ನಡೆದಿದೆ.ಮೃತ ಶಿಕ್ಷಕಿಯನ್ನು ಜಂಗಮರ ಕಲ್ಗುಡಿ ಗ್ರಾಮದ ಹೊಸಕೇರಿಯ ಹರಿತಾ ಶ್ರೀನಿವಾಸ (26) ಎಂದು ಗುರುತಿಸಲಾಗಿದೆ. ಮೃತ ಶಿಕ್ಷಕಿ ವಿದ್ಯಾನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಶಾಲೆಯ ವಾಹನ ದಿನನಿತ್ಯ ಗ್ರಾಮಕ್ಕೆ ಬಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿತ್ತು. ಎಂದಿನಂತೆ ಶಾಲೆಗೆ ಹೋಗಲು ತಮ್ಮ ಮನೆಯಿಂದ ಬೈಕ್ನಲ್ಲಿ ಶಿಕ್ಷಕಿ ಹರಿತಾ ಬಂದಿದ್ದಾರೆ. ಆದರೆ, ರಾತ್ರಿ ಇಡೀ ಸುರಿದ ಮಳೆಯಿಂದಾಗಿ ವಿದ್ಯುತ್ ತಂತಿ ಶಿಕ್ಷಕಿಯ ಮೇಲೆ ಬಿದ್ದಿದ್ದು, ಶಿಕ್ಷಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲು : ಶಿಕ್ಷಕಿಹರಿತಾ ಶ್ರೀನಿವಾಸ ಇವರ ಮೇಲೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇದಕ್ಕೆ ಸಂಬಂದಿಸಿದಂತೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 98/2025 ಕಲಂ.106(1) ಬಿಎನ್ಎಸ್-2023 ರ ಪ್ರಕಾರ ಜೆಸ್ಕಾಂನ ಲೈನ್ ಮ್ಯಾನ್, ಜ್ಯೂನಿಯರ್ ಇಂಜನೀಯರ್, ಮತ್ತು ಎ.ಇ.ಇ. ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ ಎಂದು ಎಸ್ಪಿ ಡಾ.ಎಲ್ ರಾಮ್ ಅರಸಿದ್ದಿ ಅವರು ತಿಳಿಸಿದ್ದಾರೆ.