ಹೊಸಶಕೆ ನ್ಯೂಸ್-ಕೊಪ್ಪಳ: ತಾಲೂಕಿನ ಬಹದ್ದೂರ್ ಬಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪಅಂಡಗಿಯವರು 24 ವಿದ್ಯಾರ್ಥಿಗಳಿಗೆ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಸುತ್ತಿರುವುದು ಮಕ್ಕಳಿಗೆ ಪ್ರೇರಣದಾಯಕವಾಗಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತ ಭವನದ ಆವರಣದಲ್ಲಿ ವಿಮಾನ ಪ್ರಯಾಣ ಮಾಡುವ ಮಕ್ಕಳಿಗೆ ಶುಕ್ರವಾರ ಶುಭ ಕೋರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತವಾಗಿ ವಿಮಾನ ಪ್ರಯಾಣ ಮಾಡಿಸುತ್ತಿರುವ ಬೀರಪ್ಪನವರ ಕಾರ್ಯ ಶ್ಲಾಘನೀಯವಾದದ್ದು. ಉಳ್ಳವರು ಇಂತಹ ಕಾರ್ಯಗಳನ್ನು ಮಾಡಬೇಕು. ಆ ಮೂಲಕ ಸಾಮಾಜಿಕ ಕಾಳಜಿ ತೋರಬೇಕು. ಇದರಿಂದ ಮಕ್ಕಳಿಗೆ ಜಗತ್ತಿನ ಪರಿಚಯವಾಗುವುದರ ಜೊತೆಗೆ ಆತ್ಮವಿಶ್ವಾಸ ಹೆಚ್ಚುತ್ತದೆ ಎಂದು ಹೇಳಿದರು.
ಶಿಕ್ಷಕ ಬೀರಪ್ಪ ಅಂಡಗಿ ಮಾತನಾಡಿ, ರೈತರು ದೇಶಕ್ಕೆ ಅನ್ನ ನೀಡಿದರೆ ಶಿಕ್ಷಕರಿಗೆ ಅನ್ನ ನೀಡುವವರು ವಿದ್ಯಾರ್ಥಿಗಳು. ಹಾಗಾಗಿ ಅವರಿಗೆ ಏನಾದರೂ ಸೇವೆ ಮಾಡಬೇಕೆಂಬ ಮಹದಾಸೆಯಿಂದ ಸ್ವಂತ ಹಣದಿಂದ ವಿಮಾನ ಪ್ರಯಾಣ ಹಮ್ಮಿಕೊಂಡಿದ್ದೇನೆ. ವಿಮಾನದ ಮೂಲಕ ಬೆಂಗಳೂರಿಗೆ ಕರೆದೊಯ್ದು ಅಲ್ಲಿ ಎರಡು ದಿನಗಳ ಕಾಲ ವಿಧಾನಸೌಧ, ಹೈಕೋರ್ಟ್, ಲಾಲ್ ಬಾಗ್, ನೆಹರು ತಾರಾಲಯ ಸೇರಿದಂತೆ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ತೋರಿಸಲಾಗುವುದು.
ವಿಧಾನಸೌಧದ ಹೊರಗೆ ಅಲ್ಲದೆ ಒಳಗಡೆ ಪ್ರವೇಶಕ್ಕೆ ಸ್ಪೀಕರ್ ಅವರ ಅನುಮತಿ ಕೇಳಲಾಗಿದೆ. ಅವರು ಅತ್ಯಂತ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಹಾಗಾಗಿ ವಿಧಾನಸೌಧದ ಒಳಗೆ ಪ್ರವೇಶ ಮಾಡಿ ವೀಕ್ಷಿಸುವ ಅವಕಾಶ ಒದಗಿದೆ. ಇದರಿಂದ ಬಹಳಷ್ಟು ಖುಷಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ವಿಠ್ಠಲ ಚೌಗಲಾ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವನಗೌಡ ಪಾಟೀಲ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ, ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಬಹದ್ದೂರ್ ಬಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಾನಂದ ಲೇಬಗೇರಿ, ಪಿಎಸ್ಐ ರೇವಣ್ಣ ಗುರಿಕಾರ್, ಸಿಆರ್ ಪಿ ಹನುಮಂತಪ್ಪ ಕುರಿ, ಶಿಕ್ಷಕರಾದ ಮಲ್ಲಪ್ಪ ಗುಡದಣ್ಣವರ, ಶರಣಪ್ಪ ರಡ್ಡೇರ,ಪ್ರಭು ಹೊಸಮನಿ,ಯಲ್ಲಾಲಿಂಗ,ದೇವಪ್ಪ ಒಂಟಿಗಾರ,ಮಂಜುನಾಥ ಹಿಂಡಿಹುಳಿ,ಬಾಬು ಕಿಲ್ಲೇದಾರ,ಮಂಜುನಾಥ ನಡವಲಮನಿ.ಹಜರತ್ತ,ಮಾರುತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
=ರೈತರು ದೇಶಕ್ಕೆ ಅನ್ನ ನೀಡಿದರೆ ಶಿಕ್ಷಕರಿಗೆ ಅನ್ನ ನೀಡುವವರು ವಿದ್ಯಾರ್ಥಿಗಳು. ಹಾಗಾಗಿ ಅವರಿಗೆ ಏನಾದರೂ ಸೇವೆ ಮಾಡಬೇಕೆಂಬ ಮಹದಾಸೆಯಿಂದ ಸ್ವಂತ ಹಣದಿಂದ ವಿಮಾನ ಪ್ರಯಾಣ ಹಮ್ಮಿಕೊಂಡಿದ್ದೇನೆ. ಇದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಶಿಕ್ಷಣಕ್ಕೆ ಪ್ರೋತ್ಸಾಹ ಸಿಗಲಿದೆ, ಇದಕ್ಕೆ ಇಲಾಖೆಯ ಅಧಿಕಾರಿಗಳು, ಗ್ರಾಮಸ್ಥರು, ಎಲ್ಲರೂ ಸಹಕಾರ ನಿಡಿದ್ದಾರೆ: ಶಿಕ್ಷಕ ಬೀರಪ್ಪ ಅಂಡಗಿ, ಮುಖ್ಯೋಪಾದ್ಯಯರು,
