ಕೊಪ್ಪಳ ತಾಲ್ಲೂಕಿನಲ್ಲಿ ಬೇಸಿಗೆ ಸಮಯದಲ್ಲಿ ಸಮಸ್ಯೆ ಉಂಟಾಗದಂತೆ ತಡೆಯಲು ಅಧಿಕಾರಿಗಳ ಸಭೆ
ಹೊಸಶಕೆ ನ್ಯೂಸ್-ಕೊಪ್ಪಳ : ಬೇಸಿಗೆ ಪ್ರಾರಂಭವಾಗಿರುವುದರಿಂದ ಕುಡಿಯುವ ನೀರಿನ ಕೊರತೆ ಉಂಟಾಗುವ ಸಂಭವವಿದ್ದು, ಗ್ರಾಮೀಣ ಮತ್ತು ನಗರಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನಚ್ಛೇರಿಕೆ ಕ್ರಮ ಕೈಗೊಳ್ಳಲು ತಹಶೀಲ್ದಾರ ವಿಠ್ಥಲ್ ಚೌಗಲಾ ಸೂಚಿಸಿದರು.
ತಾಲೂಕ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಬೇಸಿಗೆ ಪ್ರಾರಂಭವಾಗಿರುವದರಿಂದ ಗ್ರಾಮೀಣ ಭಾಗ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ಮೇವಿನ ಲಭ್ಯತೆ ಕುರಿತು ಮಾತನಾಡಿ, ನಾನ್ ಪೋರ್ಟೆಬಲ್ ಬಂದ ನೀರಿನ ಮೂಲಗಳಿಂದ ಕುಡಿಯುವ ನೀರು ಸರಬರಾಜು ಮಾಡಬಾರದು ಮತ್ತು ಜನರಿಗೆ ಕುಡಿಯಲು ಬಳಸಬಾರದೆಂದು ಜಾಗೃತಿ ಮೂಡಿಸಲು ಸೂಚಿಸಿದರು. ಪ್ರತಿ ವಾರ ಕಡ್ಡಾಯವಾಗಿ ಗ್ರಾಮ ಪಂಚಾಯತಿ ಮಟ್ಟದ ಕುಡಿಯುವ ನೀರಿನ ಮತ್ತು ಮೇವಿನ ಟಾಸ್ಕ್ ಫೋರ್ಸ್ ಸಭೆ ಜರುಗಿಸಿ ಅದರ ಪ್ರತಿಯನ್ನು ತಾಲೂಕ ಪಂಚಾಯತಿಗೆ ಸಲ್ಲಿಸಲು ತಿಳಿಸಿದರು.
ಮುನ್ನೆಚ್ಚರಿಕೆಯಾಗಿ ಖಾಸಗಿ ಬೋರೆವೆಲ್ ಗುರುತಿಸಿ ಮಾಲೀಕರಿಂದ ಒಪ್ಪಂದ : ತಾ.ಪಂ. ಇಒ ದುಂಡಪ್ಪ ತುರಾದಿ : ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಮಾತನಾಡಿ ನೆಲೋಗಿಪುರ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ತಾಲೂಕಿನ ಅಳವಂಡಿ, ಬೋಚನಹಳ್ಳಿ, ಕವಲೂರು, ಹಟ್ಟಿ 4 ಗ್ರಾಮ ಪಂಚಾಯತಿಗಳ 14 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಮುಂದಿನ ಒಂದು ವಾರದ ವರೆಗೆ ನದಿಯಲ್ಲಿರುವ ನೀರಿನ ಮೂಲಕ ಸರಬರಾಜು ಮಾಡಬಹುದಾಗಿದ್ದು ಮತ್ತು ಮುಂದಿನ ವಾರದಿಂದ ಗ್ರಾಮ ಪಂಚಾಯತಿಗಳಿಗೆ ನೀರಿನ ಅಭಾವವಾಗಬಹುದು.ಈ 4 ಗ್ರಾಮ ಪಂಚಾಯತಿಯವರು ಸರಕಾರಿ ಬೋರೆವೆಲ್ ಗಳನ್ನು ಪರಿಶೀಲಿಸಿ ಸನ್ನದ್ದು ಮಾಡಿಕೊಳ್ಳಲು ಮತ್ತು ಮುನ್ನೆಚ್ಚರಿಕೆಯಾಗಿ ಖಾಸಗಿ ಬೋರೆವೆಲ್ ಗುರುತಿಸಿ ಮಾಲೀಕರಿಂದ ಒಪ್ಪಂದ ಮಾಡಿಕೊಳ್ಳಲು ತಿಳಿಸಿದರು. ಸಭೆಯಲ್ಲಿ ನಗರಸಭೆಯ ಅಧಿಕಾರಿಗಳು, ಭಾಗ್ಯನಗರ ಪಟ್ಟಣ ಪಂಚಾಯತಿಯ ಅಧಿಕಾರಿಗಳು, ತಾಲೂಕ ಮಟ್ಟದ ಅಧಿಕಾರಿಗಳು, ಉಪತಹಶೀಲ್ದಾರರು, ಕಂದಾಯ ನಿರಿಕ್ಷಕರು, ಪಂಚಾಯತ ಅಭಿವೃದ್ದಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ತಾಲೂಕ ಪಂಚಾಯತಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.