ಹೊಸಶಕೆ ನ್ಯೂಸ್-ಕೊಪ್ಪಳ : ಪ್ರಪ್ರಥಮ ಬಾರಿಗೆ ಕೊಪ್ಪಳ ನಗರದಲ್ಲಿ ಮಾ.9 ರಂದು ಜರುಗುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಜಿಲ್ಲೆಗೆ ಒಂದು ಒಳ್ಳೆಯ ಮೆರಗು ಬರುವಂತೆ ಸಂಘದ ಸದಸ್ಯ ಪತ್ರಕರ್ತರು ಶ್ರಮಿಸಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗುಡೂರ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ದತ್ತಿ ಪ್ರಶಸ್ತಿ ಪ್ರಧಾನ , ಮತ್ತು ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದ ವಿವಿಧ ಕಾರ್ಯಕ್ರಮಗಳ ಪರಿಶೀಲನೆ ನಡೆಸಿ ಕಾರ್ಯಕ್ರಮದ ಬಗ್ಗೆ ವಿವಿಧ ಉಪಸಮಿತಿಗಳ ರಚನೆ ಮಾಡಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು,
ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಶಸ್ತಿ ಪುರಸ್ಕೃತರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಬರುವ ಸಂಘದ ಪ್ರತಿನಿಧಿಗಳು ಮತ್ತು ಸದಸ್ಯರು ಕೊಪ್ಪಳಕ್ಕೆ ಆಗಮಿಸಲಿದ್ದು ಅವರೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡು ಅವರಿಗೆ ವಸತಿ ಮತ್ತು ಊಟ ಉಪಚಾರದ ವ್ಯವಸ್ಥೆ ಸೇರಿದಂತೆ ಇತರ ಎಲ್ಲಾ ಅಗತ್ಯ ವ್ಯವಸ್ಥೆ ಮಾಡುವಲ್ಲಿ ಸಂಘದ ಕೊಪ್ಪಳ ಜಿಲ್ಲೆಯ ಪದಾಧಿಕಾರಿಗಳು ಮತ್ತು ಸದಸ್ಯರು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕು ಎಂದು ಅವರು ಸಲಹೆ ನೀಡಿದರು.
ಸಂಘದ ಕಾಡು೯ನೋಂದಣಿ ಮತ್ತು ಮರು ನೊಂದಣಿ ಕಾರ್ಯ ಕೂಡ ಕೂಡಲೆ ಕೈಗೊಳ್ಳಬೇಕು ರಾಜ್ಯ ಸಮಿತಿಯ ನೀಯಮಾನುಸಾರ ನೋಂದಣಿಗೆ ಪ್ರತಿಯೊಬ್ಬರು ಮಾನದಂಡಗಳನ್ನು ಅನುಸರಿಸಿ ಅರ್ಜಿ ತುಂಬಿ ಸದಸ್ಯತ್ವ ಪಡೆಯಬೇಕು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು ಸೂಚನೆ ನೀಡಿದರು,
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ ಸಿ ಲೋಕೇಶ್ ಮಾತನಾಡಿ, ಎಲ್ಲರೂ ಒಗ್ಗೂಡಿ ಕಾರ್ಯಕ್ರಮದ ರೂಪರೇಷೆಗಳನ್ನು ಸಿದ್ಧಪಡಿಸಿಕೊಂಡು ಅದರ ಯಶಸ್ವಿಗೆ ಶ್ರಮಿಸಬೇಕು ಎಂದರು. ಕಾರ್ಯಕ್ರಮದ ಸ್ಥಳ ಪಾನಘಂಟಿ ಕಲ್ಯಾಣ ಮಂಟಪಕ್ಕೆ ಭೇಟಿ ಮಾಡಿ ಪರಿಶೀಲನೆ ನಡೆಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ, ಸಂಘದ ಪದಾಧಿಕಾರಿಗಳಾದ ಸಾಧಿಕ ಅಲಿ, ಎಚ್ಎಸ್ ಹರೀಶ್, ಬಸವರಾಜ್, ಗುಡ್ಲಾನೂರ್, ರಾಜು ಬಿ ಆರ್, ಎನ್ ಎಂ ದೊಡ್ಡಮನಿ. ವೀರಣ್ಣ ಕಳ್ಳಿಮನಿ, ಮಂಜುನಾಥ್ ಅಂಗಡಿ , ಚಂದ್ ಸಿಂಗ್ ರಜಪೂತ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕಗಳ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಹಾಗೂ ಸರ್ವ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.