ಹೊಸಶಕೆ ನ್ಯೂಸ್–ಕೊಪ್ಪಳ: ಕೊಪ್ಪಳದ ಸುತ್ತಮುತ್ತ ಈಗಾಗಲೇ ಹಲವಾರು ಕಾರ್ಖಾನೆಗಳ ಉತ್ಪಾದನೆಯಿಂದ ಪರಿಸರ ಮತ್ತು ಜೀವಸಂಕುಲದ ಬದುಕಿನಲ್ಲಿ ಏರು-ಪೇರು ಆಗಿದೆ. ನೀರು, ಮಣ್ಣು, ಗಾಳಿ ಕಲುಷಿತಗೊಂಡಿದ್ದು ಜನರ ಅರೋಗ್ಯದಲ್ಲೂ ಕೂಡ ಬದಲಾವಣೆ ಆಗಿದೆ. ಕ್ಷಯ, ಅಸ್ತಮಾ, ಕ್ಯಾನ್ಸರ್ ನಂತ ಕಾಯಿಲೆಗಳು ಕಾಣಿಸಿ ರೈತರ ಬದುಕನ್ನು ನರಕಕ್ಕೆ ದೂಡಿದೆ ಎಂದು ಗಾಂಧಿ ಬಳಗದ ನೇತಾರರು ಪರಿಸರವಾದಿ, ಸಾವಯವ ಕೃಷಿಕರಾದ ಆನಂದ ತೀರ್ಥ ಪ್ಯಾಟಿ ಹೇಳಿದರು.
ಬಲ್ಡೋಟಾ ಬಿಎಸ್ಪಿಎಲ್, ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದ ಸುಮಿ, ಎಕ್ಸಿಂಡಿಯಾ ವಿಸ್ತರಣೆ ವಿರೋಧಿಸಿ ನಡೆಯುತ್ತಿರುವ 24ನೇ ದಿನದ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹವನ್ನು ಗಾಂಧೀ ಬಳಗದಿಂದ ಭಾನುವಾರ ಮೌನ ಉಪವಾಸ ಸತ್ಯಾಗ್ರಹ ನಡೆಯಿತು.
ನಗರದ ತಾ. ಪಂ. ಹತ್ತಿರ ಗಾಂಧೀ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ, ಕೇಸರಿ,ಬಿಳಿ,ಹಸಿರಿನ ಖಾದಿ ನೂಲಿನ ಹಾರವನ್ನು ಹಾಕಿ ಜಂಟಿ ಕ್ರಿಯಾ ವೇದಿಕೆಯ ಪ್ರಧಾನ ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅವರು ಗೌರವ ನಮನ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಕಾರ್ಖಾನೆಗಳ ವಿಸ್ತರಣೆ ಮಾಡಿದರೆ ಕೊಪ್ಪಳ ಮತ್ತು ಸುತ್ತಾಮುತ್ತ ಇರೋ ಹಳ್ಳಿಗಳು ಇನ್ನೂ ಹತ್ತೇ ವರ್ಷದಲ್ಲಿ ಸಂಪೂರ್ಣ ಧೂಳ್ಮಯವಾಗಿ ಜನ ಜೀವನದ ಬದುಕು ಅಸ್ತವ್ಯಸ್ತಗೊಳ್ಳುತ್ತದೆ. ಇದನ್ನು ಸರ್ಕಾರ ನಿಲ್ಲಿಸಬೇಕು ಸುಸ್ಥಿರ ಪರಿಸರಕ್ಕೆ ಪೂರಕವಾದ ಕೈಗಾರಿಕೆಗಳನ್ನು ತೆರೆದು ಇಲ್ಲಿನ ಯುವಕರಿಗೆ, ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕು ಎಂದರು.
ಬಲ್ದೋಟಾ ಕಂಪನಿ ನಮ್ಮ ಪಾಲಿಗೆ ಈಸ್ಟ್ ಇಂಡಿಯಾ ಕಂಪನಿಯಷ್ಟೇ ಪಿಡುಗಾಗಿದೆ. ಕೊಪ್ಪಳದಿಂದ ಇದನ್ನು ಓಡಿಸಲು ಗಾಂಧಿ ಮಾರ್ಗವು ನಮಗೆ ಮುಖ್ಯವಾಗಿ ಬೇಕಾಗುತ್ತದೆ ಎಂದು ಹೇಳಿದರು. 24ನೇ ದಿನದ ಅನಿರ್ದಿಷ್ಟಾವಧಿ ಧರಣಿ ಹೋರಾಟಕ್ಕೆ ಬೆಂಬಲಿಸಿ ಉಪವಾಸ ಸತ್ಯಾಗ್ರಹವನ್ನು ಗಾಂಧೀ ಬಳಗದ ಆನಂದತೀರ್ಥ ಪ್ಯಾಟಿ. ಬಸವರಾಜ ಸವಡಿ, ಯುವರಾಜ ಬಡಿಗೇರ, ಶಿವಪ್ಪ ಹಡಪದ ಹಾಗೂ ಮಲ್ಲನಗೌಡ ಡಿ. ಕೈಗೊಂಡರು.
ಧರಣಿಯಲ್ಲಿ ಸಮವಸ್ತ್ರಧಾರಿಗಳಾಗಿ ಮೌನೇಶ ಹೊಸಕೆರಿ, ವೆಂಕಟೇಶ ಬಿ.ಕೆ, ಭೀಮಪ್ಪ ಹೂಗಾರ, ಮಲ್ಲಿಕಾರ್ಜುನ ಗೋನಾಳ (ಕೆ.ಬಿ. ಗೋನಾಳ), ಮೂಕಪ್ಪ ಮೇಸ್ತ್ರಿ ಬಸಾಪುರ, ಬಿ.ಎ.ಆಡೂರು, ಮಹಾಂತೇಶ ಕೊತಬಾಳ, ಡಿ.ಎಚ್.ಪೂಜಾರ, ಬಸವರಾಜ ಶೀಲವಂತರ, ಮಖಬೂಲ್ ರಾಯಚೂರು, ಮಂಜುನಾಥ ಕವಲೂರು, ಭೀಮಪ್ಪ ಯಲಬುರ್ಗಾ, ಮಹಾದೇವಪ್ಪ ಮಾವಿನಮಡು, ಪ್ರಕಾಶ ಮೇದಾರ ಇದ್ದರು.ವೆಂಕಣ್ಣ ಕಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
