ತಾವರಗೇರಾದಲ್ಲಿ ಮಾಲಿನ್ಯಕಾರಿ ಕಾರ್ಖಾನೆ ಬಾಧಿತರ ಪರಿಸರ ಜಾಗೃತಿ ಅಧ್ಯಯನ ಶಿಬಿರ
ಹೊಸಶಕೆ ನ್ಯೂಸ್-ಕುಷ್ಟಗಿ: ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಎಲ್ಲಕ್ಕೂ ಮಿಗಿಲಾಗಿ ಜನತೆಯ ಹೋರಾಟಗಳು ಬೆಳೆದು ಬಂದಾಗ ಮಾತ್ರ ಜನರ ವಿರೋಧಿಯಾಗಿರುವ ರಾಜಕಾರಣವನ್ನು ಸೋಲಿಸಬಹುದು ಎಂದು ಸಮಾಜ ಪರಿವರ್ತನಾ ಸಮುದಾಯದ ಎಸ್.ಆರ್.ಹಿರೇಮಠ ಹೇಳಿದರು.
ತಾಲೂಕಿನ ತಾವರಗೇರ ಪಟ್ಟಣದ ಬುದ್ಧ ವಿಹಾರದಲ್ಲಿ ಜಿಲ್ಲಾ ಬಚಾವೋ ಆಂದೋಲನ ಸಮಿತಿ (ಯುವ ಪಡೆ) ನೇತೃತ್ವದಲ್ಲಿ ಜರುಗಿದ ಮಾಲಿನ್ಯಕಾರಿ ಕಾರ್ಖಾನೆ ಬಾಧಿತರ ಎರಡು ದಿನದ ಪರಿಸರ ಜಾಗೃತಿ ಅಧ್ಯಯನ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡನೇ ಮಹಾಯುದ್ಧದಲ್ಲಿ ಬಳಸಲಾದ ಪರಮಾಣುವಿನಿಂದ ಮನುಷ್ಯ ಬುದ್ಧಿ ಕಲಿಯಬೇಕು. ಅಂಬೇಡ್ಕರ್ ಅವರು 1950 ಜನೇವರಿ 26ರಂದು ಒಬ್ಬ ವ್ಯಕ್ತಿಗೆ ಒಂದೇ ಮತ ಎಂದು ಹೇಳಿದ್ದು, ಅದು ಈ ದೇಶದಲ್ಲಿ ಜಾರಿಗೆ ಬಂದದ್ದು ಬಹುದೊಡ್ಡ ಬದಲಾವಣೆಯಾಗಿದೆ. ಗ್ರಾಮೀಣ ಜನರ ಆರೋಗ್ಯ ಕೆಡಿಸಲು ಯಾರಿಗೂ ಅವಕಾಶವಿಲ್ಲ ಎಂದರು.
ಅಧಿಕಾರದಲ್ಲಿ ಉದ್ಧಟತನದಿಂದ ಯಾರೇ ನಡೆದುಕೊಂಡಾಗ ಅದನ್ನು ಪ್ರಶ್ನಿಸಲು ಸಂಘಟನೆಗಳು ಬೇಕಾಗುತ್ತವೆ, ಸಾರ್ವಜನಿಕ ವಿಚಾರಣೆ ಕರೆಯದೆ ಯಾವುದೇ ಕಾರ್ಖಾನೆಗಳನ್ನು ಹಾಕುವಂತಿಲ್ಲ ಎಂದು ಕಾನೂನು ಹೇಳುತ್ತವೆ. ಆದರೂ ಇದನ್ನು ಉಲ್ಲಂಘನೆ ಮಾಡಿ ಕೈಗಾರಿಕೆಗಳನ್ನು ಸ್ಥಾಪಿಸಲಾಗಿದೆ. ಇದೊಂದು ರಾಜಕೀಯ ಮುತ್ಸದ್ದಿತನದ ಕೊರತೆಗಿದೆ ಎಂದು ಹೇಳಿದರು.
ಬಾಧಿತರ ಮಕ್ಕಳಾದ ಮಹೇಶ ವದನಾಳ ಸಾ: ಹಿರೇಬಗನಾಳ, ಶಿವಪ್ಪ ದೇವರಮನಿ, ಗಣೇಶ ಆಚಾರ, ಕೊಟ್ರಪ್ಪ ಪಲ್ಲೇದ, ಗವಿಸಿದ್ದಪ್ಪ ಪುಟಗಿ, ಶಂಕ್ರಪ್ಪ ರ್ಕಿಹಳ್ಳಿ, ತಿರುಪತಿ ಇಂದಿರಾನಗರ ಇವರು ಹೂವಿನ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ಸಂಚಾಲಕರಾದ ಅಲ್ಲಮಪ್ರಭು ಬೆಟ್ಟದೂರು ಅಧ್ಯಕ್ಷತೆ ವಹಿಸಿದ್ಧರು. ಕೆ.ಬಿ. ಗೋನಾಳ ಮಾತನಾಡಿ, ಕೊಪ್ಪಳ ನಗರಕ್ಕೆ ಭೂತವಾಗಿ ಬಂದು ಕಾಡುತ್ತಿರುವ ಬಲ್ಡೋಟ ಬಿಎಸ್ ಪಿಎಲ್ ಕಂಪನಿಯನ್ನು ಹೊರಗೋಡಿಸುವತನಕ ಮತ್ತು ಈಗಿರುವ ಕರ್ಖಾನೆಗಳು ಮುಂದುವರಿದ ತಂತ್ರಜ್ಞಾನ ಬಳಸಿ ಮಾಲಿನ್ಯ ನಿಯಂತ್ರಣ ಮಾಡುವ ತನಕ ಬಾಧಿತ ಗ್ರಾಮಗಳ ಮತ್ತು ಕೊಪ್ಪಳ ನಗರದ ಜನರು ವಿರಮಿಸದೆ ಹೋರಾಟ ಮಾಡಬೇಕು ಎಂದರು.
ಜನ ಸಂಗ್ರಾಮ ಪರಿಷತ್ ನ ರಾಘವೇಂದ್ರಕುಷ್ಟಗಿ ಇವರು ಮಾತನಾಡಿ ತುಂಗಭದ್ರಾ ರಕ್ಷಣೆಗೆ ನಾವೆಲ್ಲ ಮುಂದಾಗಬೇಕೆಂದು, ಈಗ ಕೋಪ್ಪಳ ಮಾತ್ರವಲ್ಲ ರಾಯಚೂರು ಸೇರಿ ಆರ್.ಟಿ.ಪಿ.ಎಸ್. ಮೃತ್ಯು ಚಿನ್ನದ ಗಣಿಗಾರಿಕೆಯಿಂದ ಸಿಲಿಕೋಸಿಸ್ ಬಾಧಿಸುತ್ತಿದೆ ಇದಕ್ಕೆ ಚಿಕಿತ್ಸೆ ಕೊಡಲು ಮಧ್ಯಪ್ರದೇಶದಲ್ಲಿ ಮಾತ್ರ ಇದೆ. ಇನ್ನೊಂದು ಎಐಐಎಂಎಸ್ ನಲ್ಲಿ ಮಾತ್ರ ಸಾಧ್ಯವಿದೆ ಎಂದು ಹೇಳಿದರು.
ಹೋರಾಟಗಾರರಾದ ಮುದುಕಪ್ಪ ಎಂ. ಹೊಸಮನಿ, ಮಹಾಂತೇಶ ಕೊತಬಾಳ, ಶುಕರಾಜ ತಾಳಕೇರಿ, ಮದ್ದಾನಯ್ಯ ಹಿರೇಮಠ, ಮಾನವ ಬಂಧುತ್ವ ವೇದಿಕೆ ಮಹಿಳಾ ಸಂಚಾಲಕಿ ಶಶಿಕಲಾ ಮಾತನಾಡಿದರು. ಕೊಜಿಬ ಆಂದೋಲನ ಸಂಚಾಲಕರಾದ ಡಿ.ಎಚ್.ಪೂಜಾರ, ಟಿ.ರತ್ನಾಕರ, ಶರಣುಗಡ್ಡಿ, ನಜೀರಸಾಬ ಮೂಲಿಮನಿ, ಎಸ್.ಎ.ಗಫಾರ್, ಶರಣುಶೆಟ್ಟರ್, ಎಂ.ಕೆ.ಸಾಹೇಬ, ಶರಣು ಪಾಟೀಲ ಇತರರು ಇದ್ದರು.
==
ಕೊಪ್ಪಳ ಬಚಾವೋ ಆಂದೋಲನದ ಮುಂದಾಳು ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಕೊಪ್ಪಳದಲ್ಲಿ ಕೇಂದ್ರೀಕೃತವಾಗಿರುವ ಕಾರ್ಖಾನೆ ಕೇಂದ್ರೀಕರಣ ನೀತಿಯಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಅಲ್ಲೊಂದು ಇಲ್ಲೊಂದು ಜನವಸತಿ ಪ್ರದೇಶದಿಂದ ದೂರದಲ್ಲಿ ಉದ್ಯಮಗಳಿರಬೇಕಲ್ಲದೆ ಕೊಪ್ಪಳ ಜಿಲ್ಲೆಯ ಗಿಣಿಗೇರಿ, ಅಲ್ಲಾನಗರ, ಹಳೆಕನಕಾಪುರ, ಬೇವಿನಹಳ್ಳಿ, ಹಿರೇಬಗನಾಳ, ಹಿರೇಕಾಸನಕಂಡಿ, ಹಾಲರ್ತಿ, ಚಿಕ್ಕಬಗನಾಳ, ಕುಣಿಕೇರಿ, ಲಾಚನಕೇರಿ, ಕುಣಿಕೇರಿ ತಾಂಡಾ ಮುಂತಾದ 20ಕ್ಕಿಂತ ಹೆಚ್ಚುಹಳ್ಳಿಗಳು ಕಾರ್ಖಾನೆಗಳ ಹೊಗೆ, ದೂಳಿನಿಂದ ಬಾಧಿತವಾಗಿ ಜನ ಜೀವನ ಸಂಕಷ್ಟದಲ್ಲಿದೆ. ರೈತರ ಕೃಷಿ ಬೆಳೆ ಹಾಳಾಗಿವೆ. ಬೂದಿ ಹೊಗೆತಾಗಿದ ಮೇವು ತಿಂದುದನಗಳು ಅತಿಸಾರದಿಂದ ಸಾಯುತ್ತಿವೆ ಎಂದರು.