ಹೊಸಶಕೆ ನ್ಯೂಸ್ ಕೊಪ್ಪಳ: ಅಳವಂಡಿ–ಬೆಟಗೇರಿ ಮತ್ತು ಬಹದ್ದೂರ್ ಬಂಡಿ ಏತ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಟ್ಟು 486 ಕೋಟಿ ರೂ. ಅನುದಾನ ಹೆಚ್ಚಿಸಿ ಪರಿಷ್ಕೃತ ಡಿಪಿಆರ್ ಸಿದ್ಧಪಡಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಹದ್ದೂರ್ಬಂಡಿ ಮತ್ತು ಇತರೆ 17 ಗ್ರಾಮಗಳ ವ್ಯಾಪ್ತಿಯಲ್ಲಿ ಸರಾಸರಿಗಿಂತಲೂ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಆ ಭಾಗದ ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು 12,988 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ. ಈ ಯೋಜನೆಗೆ ಅಗತ್ಯವಿರುವ ಅಗತ್ಯವಿರುವ 0.60 ಟಿಎಂಸಿ ಅಡಿ ನೀರನ್ನು ತುಂಗಭದ್ರಾ ಹಿನ್ನೀರಿನಿಂದ ಎತ್ತಿ ಜಮೀನಿಗೆ ಹರಿಸಲಾಗುತ್ತದೆ. ಮೂರು ಕಾಲುವೆಗಳನ್ನು ನಿರ್ಮಿಸಬೇಕಾಗಿದೆ. ಹೊಲಕಾಲುವೆಗಳ ನಿರ್ಮಾಣಕ್ಕಾಗಿ 40 ಕೋಟಿ ರೂ.ಅಗತ್ಯವಿದೆ. ಯೋಜನೆ ಕಾರ್ಯಗತಕ್ಕೆ 203 ಎಕರೆ ಭೂಸ್ವಾಧೀನ ಅಗತ್ಯವಿದ್ದು 2024ರಲ್ಲಿಯೇ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಳವಂಡಿ–ಬೆಟಗೇರಿ ಯೋಜನೆಯಿಂದಾಗಿ 9000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ. ಈಗ ಹೆಚ್ಚುವರಿಯಾಗಿ 3000 ಎಕರೆಗೆ ನೀರಾವರಿ ಒದಗಿಸಲು ಅನುಕೂಲವಾಗುತ್ತದೆ.ಪ್ರತಿ ಪಂಪ್ನಿಂದ 28.28 ಕ್ಯುಸೆಕ್ನಂತೆ ಒಟ್ಟು 56.56 ಕ್ಯುಸೆಕ್ ನೀರು ಹರಿಸಲಾಗುತ್ತದೆ. ಈ ಯೋಜನೆಯಡಿ ಎರಡು ಕಾಲುವೆಗಳನ್ನು ನಿರ್ಮಿಸಲಾಗಿದ್ದು, ಹೊಲಗಾಲುವೆಗಳ ನಿರ್ಮಾಣಕ್ಕಾಗಿ 47 ಕೋಟಿ ರೂ. ಅಗತ್ಯವಿದೆ ಎಂದರು.
ಬಲ್ಡೋಡಾದಲ್ಲಿ ಸಧ್ಯ ಕೆಲಸ ನಡೆಯುತ್ತಿಲ್ಲ : ‘ಕಾರ್ಖಾನೆ ವಿಸ್ತರಣೆ ಮಾಡದಂತೆ ಈಗಾಗಲೇ ಸರ್ಕಾರವೂ ಹೇಳಿದೆ. ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರೂ ಈ ಕುರಿತು ಸದನದಲ್ಲಿಯೇ ಉತ್ತರ ಕೊಟ್ಟಿದ್ದಾರೆ. ಈಗಿರುವ ಕಾರ್ಖಾನೆಗಳಿಂದ ಆಗುತ್ತಿರುವ ಮಾಲಿನ್ಯ ತಡೆಗೂ ಕ್ರಮ ಕೈಗೊಳ್ಳಲಾಗುವುದು, ಹಾಗೂ ಬಲ್ಡೋಡಾ ಕಂಪನಿ ಉಕ್ಕಿನ ಕಾರ್ಖಾನೆ ವಿಸ್ತರಣೆ ಮಾಡಬಾರದು. ಇದಕ್ಕಾಗಿ ನಡೆಯುತ್ತಿರುವ ಕೆಲಸ ನಿಲ್ಲಿಸಬೇಕು ಎಂದು ಖುದ್ದು ಮುಖ್ಯಮಂತ್ರಿಯೇ ಸೂಚಿಸಿದ್ದು, ಅಲ್ಲಿ ಸದ್ಯಕ್ಕೆ ಯಾವುದೇ ಕೆಲಸ ನಡೆಯುತ್ತಿಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ, ಮಾಜಿ ಸಂಸದ ಸಂಗಣ್ಣ ಕರಡಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಇಟ್ಟಂಗಿ, ಹಿರಿಯ ಮುಖಂಡರಾದ ಎಸ್.ಬಿ. ನಾಗರಹಳ್ಳಿ ಇತರರು ಇದ್ದರು.
====ಬಹದ್ದೂರ್ಬಂಡಿ ಯೋಜನೆಗೆ 2018ರಲ್ಲಿ 188.41 ಕೋಟಿಗೆ ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಿ ಮೊದಲ ಹಂತದಲ್ಲಿ 80 ಕೋಟಿಗೆ ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಈಗ ಇದರ ಒಟ್ಟು ಅನುದಾನವನ್ನು 275 ಕೋಟಿಗೆ ಹೆಚ್ಚಿಸಲಾಗಿದೆ. ಅಳವಂಡಿ–ಬೆಟಗೇರಿ ಯೋಜನೆಗೆ 2021ರ ಮಾರ್ಚ್ನಲ್ಲಿ 87.10 ಕೋಟಿಗೆ ಡಿಪಿಆರ್ ಮಾಡಲಾಗಿತ್ತು. ಈಗ 211 ಕೋಟಿ ಡಿಪಿಆರ್ ಸಿದ್ಧಪಡಿಸಲು ಅನುಮತಿ ಲಭಿಸಿದೆ : ರಾಘವೇಂದ್ರ ಹಿಟ್ನಾಳ, ಕೊಪ್ಪಳ ಕ್ಷೇತ್ರದ ಶಾಸಕರು==