*ಕೃಷ್ಣದೇವರಾಯ ಸಮಾದಿ ಐತಿಹಾಸಿಕ ಸ್ಥಳ ಇದು ಅಭಿಮಾನ,ಗೌರವದ ಸಂಗತಿ -ಪಾಟೀಲ್
ಹೊಸಶಕೆ ನ್ಯೂಸ್-ಗಂಗಾವತಿ : ಕೇವಲ ಹಂಪಿ ಉತ್ಸವ ಮಾಡಿದರೆ ಸಾಲದು ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸುವ ಪ್ರಾಚ್ಯವಸ್ತುಗಳನ್ನು ನಾವು ಗೌರವಿಸುವುದರ ಜೊತೆಗೆ ಅವುಗಳನ್ನು ಸಂರಕ್ಷಿಸಬೇಕಿದೆ ಎಂದು ಕಾನೂನು. ನ್ಯಾಯ. ಮಾನವ ಹಕ್ಕುಗಳು. ಸಂಸದೀಯ ವ್ಯವಹಾರ. ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ.ಪಾಟೀಲ್ ಹೇಳಿದರು.
ಕಳೆದ ಎರಡು ಮೂರು ದಿನಗಳ ಹಿಂದೆ ಶ್ರೀಕೃಷ್ಣದೇವರಾಯ ಸಮಾಧಿ ಸ್ಥಳದಲ್ಲಿ ಮಾಂಸ ಕತ್ತರಿಸಿ ಮಾರಾಟ ಮಾಡಲಾಗುತ್ತಿದೆ ಎಂಬ ವರದಿ ಮಾಧ್ಯಮಗಳಲ್ಲಿ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಆನೆಗುಂದಿಯಲ್ಲಿರುವ ಕೃಷ್ಣದೇವರಾಯ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಕೃಷ್ಣದೇವರಾಯ ಸಮಾದಿ 64 ಕಂಬಗಳಿಂದ ಕೂಡಿದ ಐತಿಹಾಸಿಕ ಸ್ಥಳ ಇದರ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಹಾಗೂ ಗೌರವದ ಸಂಗತಿ ಇಂತಹ ಸ್ಥಳದಲ್ಲಿ ಮಾಂಸ ಮಾರಾಟ ನಡೆದಿದೆ ಎಂದರೆ ನೋವಿನ ಸಂಗತಿಯಾಗಿದೆ . ಇಲ್ಲಿಯ ಜನರು ಹೇಳುವ ಪ್ರಕಾರ ಇದು ಆಕಸ್ಮಿಕವಾಗಿ ನಡೆದ ಘಟನೆ ಎಂದು. ಆದರೆ ಇದನ್ನು ಲಘುವಾಗಿ ತಿಳಿದುಕೊಳ್ಳುವಂತಿಲ್ಲ. ಗಂಭೀರವಾಗಿ ತೆಗೆದುಕೊಳ್ಳಲಾಗುವುದು.
ಈಗಾಗಲೇ ಆನೆಗುಂದಿಯ 3 ಜನರ ಮೇಲೆ ಎಫ್.ಐ.ಆರ್ ಮಾಡಲಾಗಿದೆ. ಕನ್ನಡಿಗರಾದ ನಾವು ನಮ್ಮ ತನವನ್ನು ಗೌರವಿಸುವುದರ ಜೊತೆಗೆ ಪ್ರಾಚ್ಯವಸ್ತು ಅವಶೇಷಗಳನ್ನು ಕಾಪಾಡಲು ಪ್ರತಿಯೊಬ್ಬರು ಕೈಜೋಡಿಸಬೇಕಿದೆ. ಈ ಪರಿಸರದ ಸುತ್ತಲು ಸೌಂದರ್ಯ ಹೆಚ್ಚಿಸುವ ಕೆಲಸ ಈ ವರ್ಷದಿಂದಲೇ ಮಾಡಲಾಗುವುದು. ಕೃಷ್ಣದೇವರಾಯ ಸಮಾದಿ 64 ಕಂಬಗಳ ಸಣ್ಣಪುಟ್ಟ ರಿಪೇರಿ ಅವಶ್ಯಕತೆ ಇದೆ ಅದನ್ನು ಸರಿಪಡಿಸಲಾಗುವುದು. ನಮ್ಮ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಜವಾಬ್ದಾರಿ ಎಲ್ಲರ ಮೇಲಿದ್ದು ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದು ಹೇಳಿದರು. ಆನೆಗುಂದಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಹುಲಿಗೆಮ್ಮ ಮಾತನಾಡಿ ಕೃಷ್ಣದೇವರಾಯ ಸಮಾಧಿಯ ಮೇಲೆ ಮಾಂಸ ಕತ್ತರಿಸಿ ಮಾರಾಟ ಮಾಡಿರುವುದು ಆಕಸ್ಮಿಕವಾಗಿ ನಡೆದ ಘಟನೆಯಾಗಿದ್ದು ಇಂತಹ ಘಟನೆ ಮರು ಕಳಿಸದಂತೆ ನೋಡಿಕೊಳ್ಳಲಾಗುತ್ತದೆ. ವಿಜಯನಗರ ಸಾಮ್ರಾಜ್ಯದ ಅರಸ ಶ್ರೀ ಕೃಷ್ಣದೇವರಾಯ ನಮ್ಮ ಭಾಗದ ಹೆಮ್ಮೆಯ ಅರಸನಾಗಿದ್ದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದರಾದ ಕೆ. ರಾಜಶೇಖರ ಬಸವರಾಜ ಹಿಟ್ನಾಳ. ವಿಜಯನಗರ ಸಾಮ್ರಾಜ್ಯದ ವಂಶಸ್ಥರಾದ ಲಲಿತಾರಾಣಿ ಹಾಗೂ ಶ್ರೀ ಕೃಷ್ಣದೇವರಾಯಲು. ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೆಶಕ ಡಾ. ಆರ್. ಶಿಜೇಶ್ವರ್. ಸಹಾಯಕ ಆಯುಕ್ತ ಕ್ಯಾ. ಮಹೇಶ್ ಮಾಲಗಿತ್ತಿ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ ಸೇರಿದಂತೆ ಇತರರು ಉಪಸ್ಥಿತರಿದ್ದರು.