* ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರಿಂದ ಕಾರಣಿಕದ ಗೊರವಯ್ಯ ರಾಮಣ್ಣ ಹಾಗೂ ಬಾಬುದಾರರಿಗೆ ಕಂಕಣಧಾರಣೆ
ಹೊಸಶಕೆ ನ್ಯೂಸ್-ಹೂವಿನಹಡಗಲಿ: ತಾಲ್ಲೂಕಿನ ಮೈಲಾರದಲ್ಲಿ ಮಂಗಳವಾರ ರಥ ಸಪ್ತಮಿಯಂದು ಹಾಲು ಉಕ್ಕಿಸುವ ಸಾಂಪ್ರದಾಯಿಕ ಆಚರಣೆಯೊಂದಿಗೆ ಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಜಾತ್ರೆಗೆ ಚಾಲನೆ ನೀಡಲಾಯಿತು. ಹಾಗೂ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಕಾರಣಿಕದ ಗೊರವಯ್ಯ ರಾಮಣ್ಣ ಹಾಗೂ ಬಾಬುದಾರರಿಗೆ ಕಂಕಣಧಾರಣೆ ಮಾಡಿದರು
ಬೆಳಿಗ್ಗೆ ಮೈಲಾರಲಿಂಗಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಿ, ಕಂಕಣಧಾರಣೆ ಮಾಡಲಾಯಿತು. ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅವರು ಕಾರಣಿಕದ ಗೊರವಯ್ಯ ರಾಮಣ್ಣ ಸೇರಿದಂತೆ ಎಲ್ಲ ಬಾಬುದಾರರಿಗೆ ಕಂಕಣಧಾರಣೆ ಮಾಡಿದರು. ಬಳಿಕ ದೇವಸ್ಥಾನದ ರಂಗ ಮಂಟಪದಲ್ಲಿ ಹಾಲು ಉಕ್ಕಿಸುವ ಕಾರ್ಯಕ್ರಮ ನೆರವೇರಿತು. ಈಶಾನ್ಯ ದಿಕ್ಕಿನೆಡೆಗೆ ಹಾಲು ಉಕ್ಕಿ ಹರಿಯಿತು. ‘ಈ ದಿಕ್ಕುಗಳಲ್ಲಿ ಮಳೆ, ಬೆಳೆ ಸಮೃದ್ಧವಾಗಲಿದೆ’ ಎಂಬುದು ಭಕ್ತರ ನಂಬಿಕೆ.
ಇದಕ್ಕೂ ಮುನ್ನ ಕ್ಷೇತ್ರದ ಹೆಗ್ಗುರುತು ಆಗಿರುವ ಕಾರಣಿಕದ ಬಿಲ್ಲಿಗೆ ಪೂಜೆ ನೆರವೇರಿಸಲಾಯಿತು. ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಪೌರೋಹಿತ್ಯ ನೆರವೇರಿಸಿದರು. ದೇವಸ್ಥಾನದಲ್ಲಿ ರಥಸಪ್ತಮಿ ಆಚರಣೆಯ ಬಳಿಕ ಸ್ವಾಮಿಯ ಉತ್ಸವವು ಮೌನಸವಾರಿಯಲ್ಲಿ ಡೆಂಕನ ಮರಡಿಗೆ ತೆರಳಿತು. ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಹಾಗೂ ಬಾಬುದಾರರು, ಗ್ರಾಮಸ್ಥರು ಇದ್ದರು.
== ಕಾರಣಿಕ ಜರುಗುವವರೆಗೆ ಸ್ವಾಮಿಯ ಉತ್ಸವ ಮೂರ್ತಿ ಮರಡಿಯಲ್ಲೇ ಪ್ರತಿಷ್ಠಾಪನೆಗೊಳ್ಳಲಿದೆ. ದೇವಸ್ಥಾನದಲ್ಲಿ 11 ದಿನಗಳವರೆಗೆ ಪೂಜೆ ಹಾಗೂ ಗಂಟೆಯ ನಾದ ಮೊಳಗುವುದಿಲ್ಲ. ಫೆ. 14 ರಂದು ಕಾರಣಿಕ ನೆರವೇರುವವರೆಗೂ ಹರಕೆ ಹೊತ್ತ ಭಕ್ತರು ಹಗಲು-ರಾತ್ರಿ ವಾಸ್ತವ್ಯವಿದ್ದು ಮರಡಿ ಕಾಯುತ್ತಾರೆ. ಹರಕೆ ತೀರಿಸುವರಿಗೆ ಭಕ್ತರು ಅಂಬಲಿ ಮಜ್ಜಿಗೆ, ಬೆಲ್ಲದ ಪಾನಕ ನೀಡುತ್ತಾರೆ.==