ಹೊಸಶಕೆ ನ್ಯೂಸ್-ಕೊಪ್ಪಳ : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಪ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಈ ಕಾಯ್ದೆಯನ್ನು ವಾಪಸ್ ಪಡೆಯಲು ಆಗ್ರಹಿಸಿ ಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿವತಿಯಿಂದ ಕೊಪ್ಪಳ ನಗರದಲ್ಲಿ ಮೇ. 3 ರಂದು ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.
ಗುರುವಾರದಂದು ನಗರದ ಪತ್ರಿಕಾ ಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಧರ್ಮಗುರು ಮೌಲಾನಾ ಮುಪ್ತಿ ನಜೀರ್ ಅಹ್ಮದ್ ಹಾಗೂ ಸಮಾಜದ ಮುಖಂಡರು ಮಾತನಾಡಿ, ಸಂವಿಧಾನದ ಮೂಲಭೂತ ಅಂಶಗಳ ವಿರುದ್ಧವಾಗಿ ಮುಸ್ಲಿಮರ ನ್ಯಾಯಯುತವಾದ ಆಸ್ತಿಗಳಾದ ಮಸ್ಟಿದ್, ದರ್ಗಾ, ಈದ್ಗಾ, ಖಬ್ರಸ್ಥಾನಗಳಿಗೆ ದಕ್ಕೆ ಮತ್ತು ಮುಸ್ಲಿಂರ ಭಾವನೆಗಳಿಗೆ ಘಾಷಿಯನ್ನುಂಟು ಮಾಡುವ ವಕ್ಸ್ ತಿದ್ದುಪಡಿ ಕಾಯಿದೆ 2025 ಯನ್ನು ಜಾರಿ ಮಾಡಿರವ ಕ್ರಮವು ಸಂವಿಧಾನಾತ್ಮಕವಾದ ಹಕ್ಕುಗಳನ್ನು ಕಸಿದುಕೊಳ್ಳುವದಾಗಿದೆ ಇದನ್ನು ನಾವು ಬಲವಾಗಿ ಖಂಡಿಸಿ, ಇದರ ವಿರುದ್ಧ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.
ನಗರಸಭೆ ಅಧ್ಯಕ್ಷರು, ಸಮಾಜದ ಮುಖಂಡರಾದ ಅಮ್ಜೆದ್ ಪಟೇಲ್ ಮಾತನಾಡಿ, ಕೆಂದ್ರ ಸರ್ಕಾರವು 2014 ರಿಂದ ಸತತವಾಗಿ ಮುಸ್ಲಿಮರಿಗೆ ತೊಂದರೆ ನೀಡಲು ಮತ್ತು ಮುಸ್ಲಿಮರ ಸಂವಿಧಾನಾತ್ಮಕವಾದ ಹಕ್ಕುಗಳನ್ನು ನಿರ್ನಾಮ ಮಾಡಲು ಸಂವಿಧಾನದ ಮೂಲಭೂತ ಹಕ್ಕುಗಳು ವಿರುದ್ಧವಾಗಿ ಹಲವಾರು ಕಾನೂನುಗಳನ್ನು ಅನ್ಯಾಯವಾಗಿ ಜಾರಿ ಮಾಡಿದೆ ಮತ್ತು ಪ್ರಸ್ತುತ ಜಾರಿ ಮಾಡಿದ ವಕ್ಸ್ ತಿದ್ದುಪಡಿ ಕಾಯಿದೆಯು ಸಂವಿಧಾನ ವಿರೋಧಿಯಾಗಿದೆ ಇದನ್ನು ವಾಪಸ್ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ವಕ್ಸ್ ಆಸ್ತಿ ಅಂದರೆ ದಾನಿಗಳು ಮುಸ್ಲಿಮ್ ಸಮುದಾಯದ ಸಾಮೂಹಿಕ ಕೆಲಸಗಳಿಗೆ ದಾನ ಮಾಡಿದ ಆಸ್ತಿಗಳು ಸದರಿ ಆಸ್ತಿಗಳನ್ನು ಯಾರು ದುರುಪಯೋಗ ಮಾಡಬಾರದು ಎಂದು ಸರ್ಕಾರದ ಅಡಿಯಲ್ಲಿ ಬರುವ ವಕ್ಸ್ ಎಂಬ ಸರ್ಕಾರಿ ಮಂಡಳಿಯಲ್ಲಿ ನೊಂದಣಿ ಮಾಡಲಾಗುತ್ತದೆ ಮತ್ತು ಅದರ ನಿರ್ವಹಣೆಯನ್ನು ಮುಸ್ಲಿಮರೆ ಇಸ್ಲಾಂ ಧರ್ಮದ ಆಚರಣೆಗಳ ಅನುಗುಣವಾಗಿ ಮಾಡುತ್ತಾರೆ ಇದು ಸಂವಿಧಾನವು ಮುಸ್ಲಿಮರಿಗೆ ನೀಡಿರುವ ಮೂಲಭೂತ ಹಕ್ಕು ಸಂವಿಧಾನದ ಆರ್ಟಿಕಲ್ 26 ರ ಪ್ರಕಾರ ಭಾರತದ ಯಾವುದೇ ಧರ್ಮೀಯರು ತಮ್ಮ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಹಾಗೂ ದತ್ತಿದಾನಗನ್ನು ಮಾಡಲು ತಮ್ಮದೇ ಆದ ಸಂಸ್ಥೆಗಳನ್ನು ರಚಿಸಿಕೊಂಡು ನಿರ್ವಹಣೆ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಮುಸ್ಲಿಮ್ ಸಮಾಜದ ಮುಖಂಡರಾದ ಎಂ. ಪಾಶಾ ಕಾಟನ್ ಮಾತನಾಡಿ, ಮೇಲ್ನೋಟಕ್ಕೆ ಸೆಕ್ಯುಲಾರ್ ಕ್ರಮವೆಂದು ಕಾಣುವ ಈ ತಿದ್ದುಪಡಿಗಳು ಅನ್ಯಾಕ್ರಮಣ ದುರುದ್ದೇಶವನ್ನೇ ಹೊಂದಿರುವುದು ಸ್ಪಷ್ಟ ಏಕೆಂದರೆ ಮುಸ್ಲಿಂ ಧಾರ್ಮಿಕ ಸಂಸ್ಥೆಗಳಲ್ಲಿ ಮುಸ್ಲಿಮೇತರರನ್ನು ಕಡ್ಡಾಯ ಮಾಡುವ ಮೋದಿ ಸರ್ಕಾರ ಅದೇ ನಿರ್ಬಂಧವನ್ನು ಹಿಂದೂ, ಜೈನ, ಸಿಖ್, ಕ್ರಿಸ್ಟಿಯನ್ ಧಾರ್ಮಿಕ ಸಂಸ್ಥೆಗಳ ಆಡಳಿತ ನಿರ್ವಾಹಣೆಗಳಲ್ಲೂ ಆಯಾ ಧರ್ಮದವರಲ್ಲದವರನ್ನು ಏಕೆ ಕಡ್ಡಾಯ ಮಾಡುವುದಿಲ್ಲ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರದ ಕೋಮುವಾದಿ ಪಕ್ಷಪಾತ ಮತ್ತು ತಾರತಮ್ಯ ಎದ್ದು ಕಾಣುತ್ತದೆ. ಸ್ವಾತಂತ್ರ್ಯಾ ನಂತರದಲ್ಲಿ 1954 ರಲ್ಲಿ ವಕ್ಸ್ ಕಾಯಿದೆಯೊಂದು ಜಾರಿಯಾಯಿತು. ಅದಾದ ನಂತರದಲ್ಲಿ ಪ್ರಧಾನವಾಗಿ 1995 ರಲ್ಲಿ ಒಂದು ಸಮಗ್ರವಾದ ವಕ್ಸ್ ಕಾಯಿದೆ ಜಾರಿಯಾಯಿತು. ಇದು ಪ್ರಧಾನ ಕಾಯಿದೆಯಾಗಿದ್ದು ಮೋದಿ ಸರ್ಕಾರ ಈ ಕಾಯಿದೆಗೆ ಅಮೂಲಾಗ್ರವಾದ ತಿದ್ದುಪಡಿಯನ್ನು ತಂದಿದೆ ಎಂದು ಹೇಳಿದರು.
ಮುಖಂಡರಾದ ಕೆ.ಎಂ.ಸೈಯದ್, ಸಲೀಂ ಮಂಡಲಗೇರಿ ಮಾತನಾಡಿ, ಸಂವಿಧಾನ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿರುವ ಕೇಂದ್ರ ಸರ್ಕಾರವು ಮುಸ್ಲಿಂರನ್ನು ಗುರುಯಾಗಿರಿಸಿಕೊಂಡು ಧಮನೀಯಕ್ರಮಗಳನ್ನು ಕೈಗೊಂಡಿರುವುದು ಅತ್ಯಂತ ಖಂಡನೀಯವಾದುದ್ದು, ಇಂತಹ ಕ್ರಮಗಳು ದೇಶವಾಸಿಗಳ ಭಾವನೆಗಳಿಗೆ ಮಾತ್ರವಲ್ಲ, ಸಂವಿಧಾನದ ಹಕ್ಕು ಕಸಿದುಕೊಳ್ಳುವ ಸರ್ವಾಧಿಕಾರಿ ಧೋರಣೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ, ಸಂವಿಧಾನ ಹಾಗೂ ಅದರ ಹಕ್ಕುಗಳನ್ನು ಕಾಪಾಡಿಕೊಳ್ಳಲು ನಾವು ಹೋರಾಟ ನಡೆಸುತ್ತೇವೆ ಎಂದರು.
ಸಂವಿಧಾನ ವಿರೋಧಿ ವಕ್ಪ್ ತಿದ್ದುಪಡಿ ಕಾಯಿದೆ 2025 ಜಾರಿ ವಿರೋಧಿಸಿ ಹಾಗೂ ಇದನ್ನು ವಾಪಸ್ ಪಡೆಯಲು ಆಗ್ರಹಿಸಿ ಮೇ. 3 ಶನಿವಾರ ಜರುಗುವ ಹೋರಾಟಕ್ಕೆ ಅನೇಕ ಸಂಘ-ಸಂಸ್ಥೆಗಳ, ಮತ್ತು ವಿವಿಧ ಸಮುದಾಯದವರು ಬೆಂಬಲವನ್ನು ನೀಡಿದ್ದಾರೆ, ಸಮಸ್ತ ಮುಸ್ಲಿಂ ಭಾಂಧವರು ಹೇಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅಖಿಲ ಭಾರತ ಮುಸ್ಲಿಮ್ ವಯಕ್ತಿಕ ಕಾನೂನು ಮಂಡಳಿಯ ಮುಖಂಡರು ಕರೆ ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಜೀಂ ಅತ್ತಾರ, ಎಂ.ಡಿ.ಆಸೀಪ್ ಕರ್ಕಿಹಳ್ಳಿ, ಮಾನ್ವಿ ಪಾಷಾ, ಸಲೀಂ ಅಳವಂಡಿ , ಸೈಯದ್ ನಾಸೀರ್ ಕಂಠಿ, ಫ್ರಕೃದ್ದೀನಸಾಬ ನದಾಫ್, ಅಬ್ದುಲ್ ಅಜೀಜ್ ಮಾನ್ವಿಕರ್ ಸೇರಿದಂತೆ ಇತರರು ಇದ್ದರು.
==ಕೆಂದ್ರ ಸರ್ಕಾರವು 2014 ರಿಂದ ದಲಿತರ, ದಮನಿತರ, ಅಲ್ಪಸಂಖ್ಯಾತರ ಮತ್ತು ರೈತರ, ದುಡಿಯುವ ವರ್ಗಗಳ ಸಂವಿಧಾನಾತ್ಮಕ ಹಕ್ಕುಗಳನ್ನು ನಿರ್ನಾಮ ಮಾಡುವದಕ್ಕಾಗಿ ಸತತವಾಗಿ ಸಂವಿಧಾನದ ಮೂಲಭೂತ ಹಕ್ಕುಗಳ ವಿರುದ್ಧವಾದ ಹಲವಾರು ಕಾನೂನುಗಳನ್ನು ಅನ್ಯಾಯವಾಗಿ ಜಾರಿ ಮಾಡುತ್ತಿರುವುದು ಅತ್ಯಂತ ಖಂಡನೀಯ : ಎಂ.ಪಾಷಾ ಕಾಟನ್, ಮುಸ್ಲಿಮ್ ಸಮಾಜದ ಮುಖಂಡರು ಕೊಪ್ಪಳ. ==