ಬಣಜಿಗ ಸಮುದಾಯ ಭವನಕ್ಕೆ ರೂ.1 ಕೋಟಿ ಶಾಸಕ ಹಿಟ್ನಾಳ
ಹೊಸಶಕೆ ನ್ಯೂಸ್-ಕೊಪ್ಪಳ: ಸಾಮಾಜಿಕವಾಗಿ ಎಲ್ಲರನ್ನೂ ಸಮಾನವಾಗಿ ಕಾಣುತ್ತ ಸಹಬಾಳ್ವೆಯಿಂದ ಬದುಕುತ್ತಿದ್ದೇವೆ. ನಮ್ಮ ಹಿರಿಯರು ಹಾಕಿಕೊಟ್ಟ ಈ ಸಂಸ್ಕೃತಿಯನ್ನು ಮುಂದಿನವರೂ ಉಳಿಸಿಕೊಂಡು ಹೋಗಬೇಕು ಎಂದು ವಿಧಾನ ಪರಿಷತ್ತಿನ ಮಾಜಿಸಭಾಪತಿ ವೀರಣ್ಣ ಮತ್ತಿಕಟ್ಟಿ ಹೇಳಿದರು.
ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ತಾಲ್ಲೂಕು ಘಟಕ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಶೇ 90ಕ್ಕಿಂತಲೂ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಮತ್ತು ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳ ಏಳಿಗೆಗೆ ತಾಯಂದಿರೇ ಮೊದಲ ಗುರುವಾಗಬೇಕು, ‘ರಾಜ್ಯಕ್ಕೆ ಏಳು ಜನ ಮುಖ್ಯಮಂತ್ರಿಗಳನ್ನು ನೀಡಿದ ಹೆಗ್ಗಳಿಕೆ ಬಣಜಿಗ ಸಮಾಜಕ್ಕಿದೆ. ಕರ್ನಾಟಕ ಏಕೀಕರಣದಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ. ಬಸವಣ್ಣನವರ ಕಾಯಕ ಚಿಂತನೆಗೆ ವಿಶ್ವ ಮಾನ್ಯತೆಯಿದೆ’ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ ಒಗ್ಗಟ್ಟು, ಸಹಬಾಳ್ವೆಗೆ ಹೆಸರಾದ ಬಣಜಿಗ ಸಮಾಜದಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲು ಇಂಥ ಕಾರ್ಯಕ್ರಮ ಆಯೋಜನೆ ಮಾಡಿದ್ದು ಸಂತಸ ತಂದಿದೆ. ಸಮಾಜದ ರಾಜ್ಯಮಟ್ಟದ ಸಂಘಟನೆಯನ್ನ ಹುಟ್ಟುಹಾಕಿದವರು ಕೊಪ್ಪಳದವರು ಎಂಬುದು ಹೆಮ್ಮೆಯ ವಿಚಾರ, ಬಣಜಿಗ ಸಮುದಾಯದ ಭವನ ನಿರ್ಮಾಣಕ್ಕೆ ರೂ. 1 ಕೋಟಿ ಅನುದಾನ ನೀಡುವದಾಗಿ ಹೇಳಿದರು.
ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ ‘ಮೊದಲಿನಿಂದ ಕೊಪ್ಪಳದ ಜೊತೆ ಅವಿನಾಭಾವ ಸಂಬಂಧವಿದೆ. ಹುಬ್ಬಳ್ಳಿಯ ಬಸವೇಶ್ವರರ ಮೂರ್ತಿ ಸ್ಥಾಪನೆಗೆ ಇಲ್ಲಿನ ಅಗಡಿ ಸಂಗಣ್ಣನವರ ಬಹುದೊಡ್ಡ ಕೊಡುಗೆಯಿದೆ. ರಾಜ್ಯದಲ್ಲಿ ಸಮಾಜದಿಂದ ಯಾರೂ ಪ್ರತಿನಿಧಿಗಳಿಲ್ಲದ ಸಮಯದಲ್ಲಿ ಸಂಘಟನೆ ಕಟ್ಟಿದವರುವ ವೀರಣ್ಣ ಮತ್ತಿಕಟ್ಟಿ ಅವರು ಅನಾರೋಗ್ಯದ ನಡುವೆಯೂ ಕಾರ್ಯಕ್ರಮಕ್ಕೆ ಬಂದಿರುವುದು ಅವರ ನಿಷ್ಠೆ, ತುಡಿತ ತೋರಿಸುತ್ತದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಕೊಪ್ಪಳ ತಾಲ್ಲೂಕು ಅಧ್ಯಕ್ಷ ವೀರಣ್ಣ ಬುಳ್ಳಾ, ಗೌರವಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳೊಳ್ಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ ವಿ. ಕಮಲಾಪುರ, ಮಹಿಳಾ ಘಟಕದ ಅಧ್ಯಕ್ಷೆ ಅಪರ್ಣಾ ಬಳ್ಳೊಳ್ಳಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಸಹಾಯಕ ಆಯುಕ್ತ ಅರವಿಂದ ಜಮಖಂಡಿ, ಗಣ್ಯರಾದ ಅಶೋಕ ಹಂಚಲಿ, ಅಂದಪ್ಪ ಜವಳಿ, ಗವಿಸಿದ್ದಪ್ಪ ಕೊಪ್ಪಳ, ವಿಶ್ವನಾಥ ಬಳ್ಳೊಳ್ಳಿ, ಮಹಾಬಳೇಶ ವಡ್ಡಟ್ಟಿ, ಗುರುರಾಜ ಹಲಗೇರಿ, ಮಂಜುನಾಥ ಅಂಗಡಿ, ಶಾಂತೇಶ ಸಂಕ್ಲಾಪುರ, ರಾಜೇಶ ಬೆಳವಣಿಕಿ, ಅರವಿಂದ ಅಗಡಿ ಸೇರಿದಂತೆ ಜಿಲ್ಲೆಯ ಸಮುದಾಯದ ಅನೇಕ ಹಿರಿಯರು, ಮುಖಂಡರು ಪಾಲ್ಗೊಂಡಿದ್ದರು.
