ಹೊಸಶಕೆ ನ್ಯೂಸ್-ಗಂಗಾವತಿ: ಜನಾರ್ದನರೆಡ್ಡಿ ಅಭಿಮಾನಿಗಳು ಎದೆಗುಂದಬೇಕಿಲ್ಲ. ನಮಗೆ ರಾಜಕೀಯ ಅಧಿಕಾರ ಇಲ್ಲದಿದ್ದರೂ ನಾವು ಕಾರ್ಯಕರ್ತರ, ಅಭಿಮಾನಿಗಳ ಪರ ಇರುತ್ತೇವೆ. ಸಿಬಿಐ ಪ್ರಕರಣದ ಶಿಕ್ಷೆಯ ನಂತರ ಶಾಸಕ ಸ್ಥಾನ ರದ್ದಾಗಿದ್ದು, ಸ್ಥಾನ ಉಳಿಸಿಕೊಳ್ಳಲು ಹೈಕೋರ್ಟ್, ಸುಪ್ರೀಂಕೋರ್ಟ್ ಮೊರೆ ಹೋಗಿ, ಹೋರಾಟ ಮಾಡುತ್ತೇವೆ ಎಂದು ಎಂದು ಜಿ.ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಹೇಳಿದರು. ನಗರದ ಚನ್ನಬಸವ ತಾತನ ಕಲಾ ಮಂದಿರದಲ್ಲಿ ಜಿ.ಜನಾರ್ದನರೆಡ್ಡಿ ಅಭಿಮಾನಿ ಬಳಗದಿಂದ ನಡೆದ ವಿಶೇಷ ಸಭೆಯಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ರೆಡ್ಡಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು. ಓಬಳಾಪುರಂ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರಿಗೆ ವಿಧಿಸಲಾದ ಜೈಲು ಶಿಕ್ಷೆಯು ರಾಜಕೀಯ ಕುತಂತ್ರದಿಂದ ನಡೆದ ಘಟನೆಯಾಗಿದೆ ಎಂದರು.
ನ್ಯಾಯಾಲಯಗಳಲ್ಲಿ ಶಾಸಕ ಸ್ಥಾನ ರದ್ದತಿಗೆ ತಡೆ ಬಂದಲ್ಲಿ ಸ್ಥಾನ ಉಳಿಯುತ್ತದೆ. ಈ ಹಿಂದೆ ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯವೊಂದು ಶಿಕ್ಷೆ ನೀಡಿದಾಗ ಸಂಸದ ಸ್ಥಾನ ರದ್ದಾಗಿತ್ತು. 5 ತಿಂಗಳ ಬಳಿನ ಸುಪ್ರೀಂಕೋರ್ಟ್ ತಡೆ ನೀಡಿದಾಗ ಸಂಸದ ಸ್ಥಾನ ಮರಳಿ ಬರುತ್ತದೆ, ತಮಿಳುನಾಡಿನ ಪೆನ್ಮುಡಿ ಎಂಬ ಶಾಸಕರು ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿ ಶಾಸಕ ಸ್ಥಾನದಿಂದ ಅನರ್ಹರಾಗಿದ್ದರು. 3 ತಿಂಗಳ ನಂತರ ಅವರ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು, ಶಾಸಕ ಸ್ಥಾನ ಉಳಿದಿದೆ.
ಕಾರವಾರ ಶಾಸಕ ಸತೀಶ್ ಸೈಲ್ ಸಿಬಿಐ ಕೋರ್ಟ್ನಿಂದ 6 ಪ್ರಕರಣಗಳಲ್ಲಿ ತಲಾ 7 ಶಿಕ್ಷೆಗಳಿಗೆ ಗುರಿಯಾಗಿದ್ದರು. 1 ತಿಂಗಳ ನಂತರ ಅವರ ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮತ್ತೆ ಅವರಿಗೆ ಶಾಸಕ ಸ್ಥಾನ ಲಭಿಸಿದೆ. ಹಾಗಾಗಿ ಜೈಲುಶಿಕ್ಷೆ ವಿಚಾರದಲ್ಲಿ ಕಾರ್ಯಕರ್ತರು, ಅಭಿಮಾನಿಗಳು ದುಃಖ ಪಡುವಂತಿಲ್ಲ. ರೆಡ್ಡಿ ಸಾರ್ವಜನಿಕ ಬದುಕಿನಲ್ಲಿ ಯಾರಿಗೂ ಮೋಸ ಮಾಡಿಲ್ಲ. ಧರ್ಮ ಆಧಾರಿತ ರಾಜಕೀಯ ಮಾಡಿಲ್ಲ, ನಾವೆಲ್ಲರೂ ಒಗ್ಗಟ್ಟಿನಿಂದ ಇರೋಣ, ನಾವು ಸದಾ ಜನರೊಂದಿಗೆ ಇರುತ್ತೇನೆ, ಎಲ್ಲರನ್ನೂ ಭೆಟಿ ಮಾಡುವೆ ಎಂದು ಹೇಳಿದರು.