ಹೊಸಶಕೆ ನ್ಯೂಸ್-ಕೊಪ್ಪಳ: ರಸಗೊಬ್ಬರವನ್ನು ಮಾರಾಟಕ್ಕಾಗಿ ಒಂದೇ ಕಂಪನಿ ಅಥವಾ ಎಜೆನ್ಸಿಯವರಿಗೆ ನೀಡಿದರೆ, ರೈತರಿಗೆ ಖರೀಸಲು ಸಮಸ್ಯೆಯುಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ರೈತರ ಸೊಸೈಟಿ ಮೂಲಕ ರಸಗೊಬ್ಬರ ವಿತರಣೆಗೆ ಆದ್ಯತೆ ನೀಡುವಂತೆ ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ಎಸ್. ತಂಗಡಗಿ ಅವರು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರಸಗೊಬ್ಬರ ಪೂರೈಕೆಯ ಕುರಿತಾಗಿ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಕೆಲವೇ ಅಂಗಡಿಗಳಿಗೆ ರಸಗೊಬ್ಬರ ಮಾರಾಟ ಮಾಡಲು ನೀಡಿರುವುದಾಗಿ ರೈತರು ದೂರು ನೀಡಿದ್ದಾರೆ. ಇದರಿಂದ ರೈತರು ಗೊಬ್ಬರಕ್ಕಾಗಿ ಕ್ಯೂನಲ್ಲಿ ನಿಲ್ಲುವಂತಾಗಿದೆ ಹಾಗೂ ಕೊಪ್ಪಳ ತಾಲ್ಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿಯೂ ಸಹ ಒಂದೆ ಅಂಗಡಿಯಲ್ಲಿ ಗೊಬ್ಬರಕ್ಕಾಗಿ ರಾತ್ರಿ ಇಡೀ ರೈತರು ಪಾಳೆ ನಿಂತಿದ್ದಾರೆ ಎಂದು ಪ್ರತಿಕೆಗಳಲ್ಲಿ ವರದಿಯಾಗಿದೆ.
ಕೂಡಲೇ ಜಿಲ್ಲೆಯ ಸಹಕಾರ ಸಂಘಗಳಿಗೆ ಮತ್ತು ರಸಗೊಬ್ಬರ ಮಾರಾಟ ಎಜೆನ್ಸಿಯವರಿಗೆ ರಸಗೊಬ್ಬರವನ್ನು ಸಮಾನವಾಗಿ ಹಂಚಿಕೆ ಮಾಡಲು ಕೃಷಿ ಇಲಾಖೆ ಅಧಿಕಾರಿಗಳು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು. ಸದ್ಯ ರೈತರಿಗೆ ನಾವೆಲ್ಲರೂ ರಕ್ಷಣೆಯನ್ನು ನೀಡಬೇಕಾಗಿದ್ದು, ರಸಗೊಬ್ಬರ ಮಾರಾಟ ಕಂಪನಿಯವರು ತಮ್ಮ ಅನುಕೂಲಕ್ಕೆ ತಕ್ಕಂತೆ ರಸಗೊಬ್ಬರಗಳನ್ನು ಮಾರಾಟ ಮಾಡುವಂತಿಲ್ಲ. ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು.
ನಿಗದಿತ ದರಕ್ಕಿಂತಲು ಹೆಚ್ಚಿನ ದರಕ್ಕೆ ರಸಗೊಬ್ಬರವನ್ನು ಮಾರಾಟ ಮಾಡುವ ರಸಗೊಬ್ಬರ ಅಂಗಡಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಮತ್ತು ಅಂತಹ ಅಂಗಡಿಗಳ ಪರವಾನಿಗೆ ರದ್ದು ಮಾಡಬೇಕೆಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸಚಿವರು ನಿರ್ದೇಶನ ನೀಡಿದರು.
ಸಭೆಯಲ್ಲಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿಲ್ಲಾಧಿಕಾರಿ ಸುರೇಶ ಬಿ. ಇಟ್ನಾಳ, ಜಿ. ಪಂ. ಸಿಇಒ ವರ್ಣಿತ ನೇಗಿ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರೆಡ್ಡಿ ಶ್ರೀನಿವಾಸ, ಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ಉಪ ನಿರ್ದೇಶಕ ಎಲ್.ಸಿದ್ದೇಶ್ ಇತರೆ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ತಹಶೀಲ್ದಾರರು, ವಿವಿಧ ತಾಲ್ಲೂಕುಗಳ ಕೃಷಿ ಅಧಿಕಾರಿಗಳು, ರಸಗೊಬ್ಬರ ವಿತರಕ ಕಂಪನಿಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
== ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್ ಅವರು, ಕೊಪ್ಪಳ ಜಿಲ್ಲೆಯಲ್ಲಿ ಈ ವರ್ಷ ಮಳೆ ಬೇಗನೆಯಾಗಿರುವುದರಿಂದ ಭತ್ತದ ನಾಟಿ ಜೊತೆಗೆ ಮುಂಗಾರು ಬೆಳೆಗಳ ಬಿತ್ತನೆಯು ಬೇಗನೆ ಆಗಿದೆ. ಕಳೆದ ವರ್ಷ 2.41 ಲಕ್ಷ ಹೆಕ್ಟರ್ ಬಿತ್ತನೆಯಾಗಿದ್ದು, ಈ ವರ್ಷ 3.26 ಲಕ್ಷ ಹೆಕ್ಟರ್ ಬಿತ್ತನೆಯಾಗಿದ್ದು, ಹೆಚ್ಚುವರಿಯಾಗಿ 85 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬಿತ್ತನೆ ಯಾಗಿರುತ್ತದೆ. ಹಾಗಾಗಿ ರಸಗೊಬ್ಬರದ ಬೇಡಿಕೆಯೂ ಹೆಚ್ಚಾಗಿದೆ. ಕಳೆದ ವರ್ಷ ಜುಲೈ ಮಾಹೆಯಲ್ಲಿ 9610 ಟನ್ ಯುರಿಯಾದ ಬೇಡಿಕೆಯಿತ್ತು. ಈ ಬಾರಿ 10,360 ಟನ್ ಯುರಿಯಾದ ಬೇಡಿಕೆಯಲ್ಲಿ ಈಗಾಗಲೇ 11,252 ಟನ್ ಯುರಿಯಾ ಪೂರೈಸಲಾಗಿದೆ. ಇಂದು ಬೆಳಿಗ್ಗೆಯೂ 230 ಟನ್ ಯುರಿಯಾ ಜಿಲ್ಲೆಗೆ ಬಂದಿದ್ದು, ಮುಂದಿನ ವಾರದಲ್ಲಿ ಸುಮಾರು 3431 ಟನ್ ಯುರಿಯಾ ಜಿಲ್ಲೆಗೆ ಬರಲಿದ್ದು, ಹಂತ ಹಂತವಾಗಿ ಆಗಸ್ಟ್ ಮಾಹೆಯ ಬೇಡಿಯ ಅನುಗುಣವಾಗಿ ರಸಗೊಬ್ಬರವನ್ನು ಪೂರೈಸಲಾಗುತ್ತಿದೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.