ಹೊಸಶಕೆ ನ್ಯೂಸ್ -ಕೊಪ್ಪಳ : ಸಾರ್ವಜನಿಕರು ತಮ್ಮ ಆಸ್ತಿಯ ಎ ಖಾತ ಮತ್ತು ಬಿ ಖಾತವನ್ನು ಸುಲಭವಾಗಿ ಪಡೆದುಕೊಳ್ಳುವಂತೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ಹೇಳಿದರು.
ಅವರು ಗುರುವಾರ ನಗರದ ಮೂರನೇ ವಾರ್ಡಿನಲ್ಲಿ ಕೊಪ್ಪಳ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ಕೊಪ್ಪಳ ನಗರಸಭೆ ಕಾರ್ಯಲಯದ ವತಿಯಿಂದ ಇ-ಖಾತಾ ಅಭಿಯಾನ ಮತ್ತು ಎ ಖಾತ ಮತ್ತು ಬಿ ಖಾತ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸುಮಾರು ವರ್ಷಗಳಿಂದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ ಖಾತಾ ಮತ್ತು ಬಿ ಖಾತ, ಎಂಬಿ ನಂಬರ್ ನಮೂನೆ 3 ನ್ನು ಪಡೆಯಲು ಸಾರ್ವಜನಿಕರು ಪರದಾಡುವಂತ ಸ್ಥಿತಿ ಗಮನಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಸಾರ್ವಜನಿಕರ ಅನುಕೂಲಕ್ಕಾಗಿ ಮನೆಬಾಗಿಲಿಗೆ ಎ ಖಾತ ಮತ್ತು ಬಿ ಖಾತ ಫಾರಂ ನಂಬರ್ 3ರ ವಿತರಣೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರಿಂದಾಗಿ ತುಂಬಾ ಅನುಕೂಲವಾಗಿದೆ. ನಮ್ಮ ಸರ್ಕಾರವು ಹಮ್ಮಿಕೊಂಡಿರುವ ಈ ಅಭಿಯಾನದಡಿ ಮೂರು ತಿಂಗಳ ಒಳಗಾಗಿ ಕೊಪ್ಪಳ ನಗರದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಎ ಖಾತ ಬಿ ಖಾತದಿಂದ ಜನರಿಗೆ ಸರ್ಕಾರದಿಂದ ವಿವಿಧ ಗೃಹ ಯೋಜನೆಗಳಡಿ ಸಹಾಯಧನ, ಸಾಲ ಸೌಲಭ್ಯಗಳು ಅತ್ಯಂತ ಸುಲಭವಾಗಿ ಸಿಗಲಿವೆ. ಇಂತಹ ನೂತನ ಯೋಜನೆಯನ್ನು ಕರ್ನಾಟಕ ಸರ್ಕಾರ ಹಮ್ಮಿಕೊಂಡಿದ್ದು, ಇದರಿಂದ ಕೊಪ್ಪಳ ನಗರಸಭೆ ವ್ಯಾಪ್ತಿಯ ಸುಮಾರು 8 ಸಾವಿರಕ್ಕೂ ಅಧಿಕ ನಿವೇಶನಗಳು, ಆಶ್ರಯ ಮನೆಗಳಿಗೆ ಅನುಕೂಲವಾಗಲಿದೆ. ಕೊಪ್ಪಳ ನಗರದ ಪ್ರತಿಯೊಬ್ಬರು ತಮ್ಮ ಮನೆಯ ಆಸ್ತಿ ದಾಖಲೆಯ ಪತ್ರಗಳನ್ನು ನೀಡಿ, ಎ ಖಾತ ಮತ್ತು ಬಿ ಖಾತ ಪಡೆದುಕೊಂಡು ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಸಾರ್ವಜನಿಕರಿಗೆ ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಕೊಪ್ಪಳ ನಗರಸಭೆಯ ಉಪಾಧ್ಯಕ್ಷರಾದ ಅಶ್ವಿನಿ ಗದುಗಿನಮಠ್, ಪೌರಾಯುಕ್ತರಾದ ಗಣಪತಿ ಪಾಟೀಲ್, ಓಣಿಯ ಹಿರಿಯರಾದ ಖಾಜಾ ಹುಸೇನ್ ರೆವಡಿ, ಸಲೀಂ ಅಳವಂಡಿ, ಹಜರತ್ ಮುಜಾವರ್ ಸೇರಿದಂತೆ ನಗರಸಭೆಯ ಕಂದಾಯ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.