ಹೊಸಶಕೆ ನ್ಯೂಸ್-ಕುಷ್ಟಗಿ: ಗದಗ-ವಾಡಿ ನೂತನ ಮಾರ್ಗದಲ್ಲಿ ಮೆ. 15 ರಂದು ಗುರುವಾರ ಬೆಳಿಗ್ಗೆ ಪಟ್ಟಣದ ರೈಲು ನಿಲ್ದಾಣದಲ್ಲಿ 11 ಗಂಟೆಗೆ ರೈಲು ಸಂಚಾರ ಆರಂಭಗೊಳ್ಳುವ ಐತಿಹಾಸಿಕ ಕಾರ್ಯಕ್ರಮವು ಸ್ಮರಣೀಯವಾದುದ್ದು ಎಂದು ಇದಕ್ಕೆ ಸಾರ್ವಜನಿಕರು ಸಹಕಾರ ಅಗತ್ಯವಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ನಿಲ್ದಾಣದಲ್ಲಿ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿ ಇಲ್ಲಿ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ನಡೆಸಿದ ಪೂರ್ವಸಿದ್ಧತೆ ಸಭೆಯಲ್ಲಿ ಮಾತನಾಡಿದ ಅವರು, ನಮ್ಮ ಭಾಗದಲ್ಲಿಯೂ ರೈಲು ಸಂಚಾರ ಸೇವೆ ಆರಂಭಗೊಂಡಿರುವುದು ಕೇಂದ್ರ ಸರ್ಕಾರದ ದೊಡ್ಡ ಸಾಧನೆಯಾಗಿದ್ದು ಇಂಥ ಅವಿಸ್ಮರಣೀಯ ಗಳಿಗೆಗೆ ಎಲ್ಲರೂ ಸಾಕ್ಷಿಯಾಗಬೇಕು ಎಂದರು.
ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಲಿದ್ದು, ಮೂಲಸೌಲಭ್ಯ ಅಭಿವೃದ್ಧಿ ಖಾತೆ ಸಚಿವ ಎಂ.ಬಿ.ಪಾಟೀಲ ಹಾಗೂ ಜಿಲ್ಲೆಯ ಸಂಸದರು, ಶಾಸಕರು ಪಾಲ್ಗೊಳ್ಳಲಿದ್ದಾರೆ , ರೈಲ್ವೆ ಯು ಸಧ್ಯ ಹುಬ್ಬಳ್ಳಿವರೆಗೆ ಮಾತ್ರ ರೈಲು ಸಂಚರಿಸಲಿದ್ದು, ಬೆಂಗಳೂರಿಗೆ ಪ್ರತ್ಯೇಕ ರೈಲು ಸಂಚಾರಕ್ಕೆ ಅನುಮತಿಸುವಂತೆ ಕೋರಿ ರೈಲ್ವೆ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ರೈಲ್ವೆ ಹೋರಾಟ ಸಮಿತಿಯ ವೀರೇಶ ಬಂಗಾರಶೆಟ್ಟರ, ಮುಖಂಡರಾದ ಫಕೀರಪ್ಪ ಚಳಗೇರಿ, ಭೀಮನಗೌಡ ಪಾಟೀಲ, ಹಂಪನಗೌಡ ಬಳೂಟಗಿ, ಸತ್ಯಪ್ಪ ಮಡಿವಾಳರ, ಬಾಬು ಘೋರ್ಪಡೆ, ಸಂಗನಗೌಡ ಪಾಟೀಲ, ಮಹಾಂತೇಶ ಬದಾಮಿ, ನಜೀರಸಾಬ್ ಮೂಲಿಮನಿ, ಪಾಂಡುರಂಗ ಆಶ್ರಿತ, ಮಹಾಂತಯ್ಯ ಅರಳೆಲೆಮಠ, ಶರಣಪ್ಪ ಹೂಗಾರ, ಸಯ್ಯದ್ ಮುರ್ತುಜಾ, ಪರಶುರಾಮ ನಿರಂಜನ, ಅಶೋಕ ಬಳೂಟಗಿ, ಶಶಿಧರ ಕವಲಿ, ಜಯತೀರ್ಥ ಸೌದಿ, ಕಂದಕೂರಪ್ಪ, ಮಹಾಂತೇಶ ಮಂಗಳೂರು, ಮುತ್ತಣ್ಣ ಬಾಚಲಾಪುರ, ಅನಿಲಕುಮಾರ ಆಲಮೇಲ ಸೇರಿದಂತೆ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.