* ಬಸವ ಜಯಂತಿಯು ರಾಷ್ಟ್ರ ಮಟ್ಟದ ಕಾರ್ಯಕ್ರಮವಾಗಬೇಕು– ಅರವಿಂದ ಜತ್ತಿ
ಹೊಸಶಕೆ ನ್ಯೂಸ್-ಕೊಪ್ಪಳ : ಬಸವಣ್ಣನವರು 12ನೇ ಶತಮಾನದಲ್ಲಿ ವಿಶ್ವದಲ್ಲೇ ಮೊದಲನೆ ಸಂಸತ್ತನ್ನು ರಚನೆ ಮಾಡಿ, ವರ್ಣ ಭೇದ, ಜಾತಿ ಭೇದವನ್ನು ಹೋಗಲಾಡಿಸಲು ಶ್ರಮಿಸಿದವರು. ಸಮಾನತೆಯ ಸಮಾಜವನ್ನು ಕೊಡಬೇಕೆಂಬ ಉದ್ದೇಶದಿಂದ ಚಿಂತನೆಗಳನ್ನಷ್ಟೇ ಮಾಡದೆ, ಚಳುವಳಿಗಳ ಮೂಲಕ ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದರು ಎಂದು ಸಂಸದರಾದ ಕೆ.ರಾಜಶೇಖರ ಹಿಟ್ನಾಳ ಹೇಳಿದರು.
ನಗರದ ಶ್ರೀ ಗವಿಮಠದ ಆವರಣದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಜಗತ್ತಿಗೆ ಸಂಸತ್ ಪರಿಕಲ್ಪನೆಯನ್ನು ನೀಡಿದವರು, 12ನೇ ಶತಮಾನದಲ್ಲಿ ಬಸವಣ್ಣನವರು ವಿಶ್ವದ ಮೊದಲ ಸಂಸತ್ತನ್ನು ಸ್ಥಾಪನೆ ಮಾಡಿರುವುದೇ ಮುಖ್ಯ ಕಾರಣ. ಇದಕ್ಕಾಗಿ ಅವರನ್ನು ಜಗಜ್ಯೋತಿ ಬಸವಣ್ಣ ಎಂದು ಕರೆಯಲಾಗುತ್ತಿದೆ ಎಂದರು.
‘ಕಾಯಕವೇ ಕೈಲಾಸ’ ಎಂಬಂತೆಯೇ ಎಲ್ಲಾ ಧರ್ಮಗಳಲ್ಲಿ ದುಡಿಯುವ ಬಗ್ಗೆ ತಿಳಿಸಲಾಗುತ್ತದೆ. ಕೆಲಸದಲ್ಲಿ ಶ್ರದ್ಧೆಯಿರಬೇಕು, ಅದರಲ್ಲೆ ಕೈಲಾಸ ಕಾಣಬೇಕು ಅಂತ ವಿವಿಧ ರೀತಿಯಲ್ಲಿ ಹೇಳಲಾಗುತ್ತದೆ. ಜಗತ್ತಿನ ಬಹಳಷ್ಟು ರಾಷ್ಟ್ರಗಳಲ್ಲಿ ಶಾಂತಿಯುತ ದೇಶ, ಸಂಸ್ಕ್ರತಿಯಲ್ಲಿ ಜಗತ್ತಿಗೆ ಮೊದಲನೆಯ ಸ್ಥಾನದಲ್ಲಿ ಬರುವಂತ ರಾಷ್ಟ್ರ ಅಂದರೆ ಭಾರತ. ನಮ್ಮ ದೇಶವು ಸಂಸ್ಕೃತಿಯಲ್ಲಿ ಅಷ್ಟೊಂದು ಶ್ರೇಷ್ಠವಾಗಿದೆ. ನಾವೆಲ್ಲರೂ ಬಸವಣ್ಣನವರ ಆದರ್ಶಗಳನ್ನು ಪಾಲನೆ ಮಾಡುವುದರ ಜತೆಗೆ ಸಮ ಸಮಾಜವನ್ನು ನಿರ್ಮಾಣ ಮಾಡುವಂತಹ ಕೆಲಸ ಮಾಡೋಣ ಎಂದು ಹೇಳಿದರು.
ಬಸವ ಜಯಂತಿಯು ರಾಷ್ಟ್ರ ಮಟ್ಟದ ಕಾರ್ಯಕ್ರಮವಾಗಬೇಕು : ಬೆಂಗಳೂರು ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ ಅವರು ಜಗಜ್ಯೋತಿ ಬಸವೇಶ್ವರರ ಕುರಿತು ವಿಶೇಷ ಉಪನ್ಯಾಸ ನೀಡಿ, ಬಸವಣ್ಣನವರು ವಿಶ್ವಮಾನವತೆ ಹಾಗೂ ವಿಶ್ವ ಪ್ರಜ್ಞೆಯ ಮೂಲಕ 12ನೇ ಶತಮಾನದಲ್ಲಿಯೇ ಸಮಾಜದಲ್ಲಿ ಹೊಸ ಕ್ರಾಂತಿಯನ್ನು ಸೃಷ್ಠಿಸಿದರು. ಬಸವಣ್ಣನವರ ಬದುಕು, ವಚನಗಳನ್ನು ಬರಿ ಮಾತುಗಳಲ್ಲಿ ವಿಜೃಂಭಿಸದೇ ಅಕ್ಷರಶಃ ಅವುಗಳನ್ನು ನಮ್ಮ ನಡೆನುಡಿಯೊಳಗೆ ಒಂದಾಗಿಸಿಕೊಂಡು ಬದುಕನ್ನು ಸಾಗಿಸಿಕೊಳ್ಳಬೇಕು, ಬಸವ ಜಯಂತಿಯು ರಾಷ್ಟ್ರ ಮಟ್ಟದ ಕಾರ್ಯಕ್ರಮವಾಗಬೇಕು. ಈ ಬಗ್ಗೆ ಕರ್ನಾಟಕ ರಾಜ್ಯದ ಎಲ್ಲಾ ಸಂಸದರು ಲೋಕಸಭೆಯಲ್ಲಿ ಧ್ವನಿ ಎತ್ತಬೇಕು ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಅಥಣಿ ತಾಲ್ಲೂಕಿನ ಜನವಾಡದ ಅಲ್ಲಮಪ್ರಭು ಮಠದ ಪೂಜ್ಯಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿದರು. ಧಾರವಾಡದ ಕೆ.ಎಲ್.ಇ. – ಮೃತ್ಯುಂಜಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ವೀಣಾ ಯಲಿಗಾರ ಅವರು ಬಸವ ಚಿಂತನೆಗಳ ಕುರಿತು ಮಾತನಾಡಿದರು.
*ಬಸವ ಕಾರುಣ್ಯ ಪ್ರಶಸ್ತಿ ಪ್ರದಾನ:* ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಬಸವಾನುಯಾಯಿ ಸಂಘ ಸಂಸ್ಥೆಗಳ ವತಿಯಿಂದ ಕಾಯಕ ಜೀವಿಗಳಾದ ಜಯಶ್ರೀ ಗುಳಗಣ್ಣವರ್ ಹಾಗೂ ಬಸವನಗೌಡ ಅವರಿಗೆ ‘ಬಸವ ಕಾರುಣ್ಯ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಬಿಜಕಲನ ಶಿವಲಿಂಗ ಮಹಾಸ್ವಾಮಿಗಳು, ಬಸವ ಸಮಾಜದ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳೊಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಭಾಗ್ಯನಗರದ ಶ್ರೀ ಗುರುಕೃಪಾ ಕಲಾಸಂಘದ ಶಕುಂತಲಾ ಬೆನ್ನಾಳ ಹಾಗೂ ಸಂಗಡಿಗರು ವಚನ ಸಂಗೀತ ಹಾಗೂ ನಾಡಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.
*ಪುತ್ಥಳಿಗೆ ಮಾಲಾರ್ಪಣೆ:* ನಗರಸಭೆಯ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಉದ್ಯಾನವನದಲ್ಲಿರುವ ಮಹನೀಯರ ಪುತ್ಥಳಿಗೆ ಹಾಗೂ ನಗರದ ಬಸವೇಶ್ವರ ವೃತ್ತದ (ಗಂಜ್ ಸರ್ಕಲ್) ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಸಂಸದರಾದ ಕೆ.ರಾಜಶೇಖರ ಹಿಟ್ನಾಳ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷರಾದ ಅಮ್ಜದ್ ಪಟೇಲ್, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೇಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್ ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಮಾಜಿ ಸಂಸದ ಸಂಗಣ್ಣ ಕರಡಿ,
ನಗರಸಭೆ ಉಪಾಧ್ಯಕ್ಷರಾದ ಅಶ್ವಿನಿ ಗದಗಿನಮಠ, ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಲತಾ ಚಿನ್ನೂರು ಹಾಗೂ ಇತರೆ ಸದಸ್ಯರು, ಕೊಪ್ಪಳ ತಹಶಿಲ್ದಾರ ವಿಠ್ಠಲ ಚೌಗಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ್ ಮರಬನಳ್ಳಿ, ಬಸವ ಸಮಾಜದ ಜಿಲ್ಲಾಧ್ಯಕ್ಷರಾದ ಬಸವರಾಜ ಬಳ್ಳೊಳಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಇತರೆ ಜನಪ್ರತಿನಿಧಿಗಳು ಹಾಗೂ ಹಲವಾರು ಜನರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದು, ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮತ್ತು ಪುತ್ಥಳಿಗೆ ಪುಷ್ಪ ನಮನವನ್ನು ಸಮರ್ಪಿಸುವುದರ ಮೂಲಕ ಗೌರವ ಸಲ್ಲಿಸಿದರು.
== ಜಗತ್ತಿನಲ್ಲಿ ಬಹಳಷ್ಟು ರಾಷ್ಟ್ರಗಳಿದ್ದು, ಎಲ್ಲಾ ದೇಶಗಳು ಸಂಸತ್ತನ್ನು ಹೊಂದಿವೆ, ಇಲ್ಲಿ ಸಮಸ್ಯೆಗಳ ಕುರಿತು ಚರ್ಚೆ ಮಾಡಲಾಗುತ್ತದೆ. ಸಮಾಜದಲ್ಲಿ ಸಮಾನತೆ ಕೊಡುವುದರ ಬಗ್ಗೆಯೂ ಚರ್ಚೆ ಮಾಡಲಾಗುತ್ತದೆ. ಇಂದು ಎಲ್ಲರಿಗೂ ಸಮಾನ ಅವಕಾಶಗಳು ಸಿಗುತ್ತಿವೆ ಅಂದರೆ, ಬಸವಣ್ಣನವರು ಸಮಾನತೆಯ ಜತೆಗೆ ಎಲ್ಲರೂ ಶ್ರಮ ಪಡಬೇಕು, ಶ್ರಮದ ಫಲವನ್ನ ಸಮಾನವಾಗಿ ಹಂಚಿಕೊಳ್ಳಬೇಕು ಎನ್ನುವುದನ್ನು ಸಹ ಸಮಾಜಕ್ಕೆ ತಿಳಿಸಿ ಕೊಟ್ಟಿದ್ದಾರೆ : ರಾಜಶೇಖರ್ ಹಿಟ್ನಾಳ, ಸಂಸದರು ಕೊಪ್ಪಳ ==