ಹೊಸಶಕೆ ನ್ಯೂಸ್- -ಕೊಪ್ಪಳ: ಕಾಂಗ್ರೆಸ್ ಸರಕಾರದ ಬಜೆಟ್ ನಿಂದ ಹೆಚ್ಚಿನ ನಿರೀಕ್ಷೆ ಏನೂ ಇಲ್ಲ ಎಂಬ ನಮ್ಮ ನಿಲುವನ್ನು ಈ ಸರಕಾರ ಸ್ಪಷ್ಟಪಡಿಸಿದೆ. ಕೊಪ್ಪಳಕ್ಕೆ ಏನಾದರೂ ಸಿಕ್ಕಿದೆಯೇ ಎಂಬುದನ್ನು ಕನ್ನಡಕ ಹಾಕಿ ಹುಡುಕುವಂತಹ ಪರಿಸ್ಥಿತಿ ಇದೆ. ಸೂಪರ್ ಸ್ಪೆಷಾಲಿಟಿ ಹಾಗೂ ಮೇಕೆ ಮತ್ತು ಕುರಿ ಮಾರುಕಟ್ಟೆ ಯೋಜನೆಗಳ ಘೋಷಣೆ ಬಿಟ್ಟಂತೆ ಕೊಪ್ಪಳಕ್ಕೆ ಬೇರೆ ಏನು ಇಲ್ಲ ಎಂದು ಜೆಡಿಎಸ್ ರಾಜ್ಯ ಕೋರ್ ಕಮೀಟಿ ಸದಸ್ಯರಾದ ಸಿ.ವಿ.ಚಂದ್ರಶೇಖರ್ ಹೇಳಿದ್ದಾರೆ.
ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿ, ಆರ್ಥಿಕ ಆಶಿಸ್ತು ನೋಡಿದರೆ ಈ ಯೋಜನೆಗಳು ಕಾರ್ಯರೂಪಕ್ಕೆ ಬರುವುದು ಅಸಾಧ್ಯ. ತುಂಗಭದ್ರಾ ಜಲಾಶಯದ ಹೂಳಿನ ಸಮಸ್ಯೆ ಕುರಿತಂತೆ ಆಂಧ್ರ ಸರಕಾರದೊಡನೆ ಚರ್ಚಿಸುವುದಾಗಿ ಹೇಳಲಾಗಿದೆ. ಏನು ಚರ್ಚೆ ಮಾಡುತ್ತಾರೆ ಎಂಬುದು ಯಾರಿಗೂ ಗೊತ್ತಿಲ್ಲ. ಇಷ್ಟು ಪ್ರಮಾಣದಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರ ನಿರ್ಲಕ್ಷಕ್ಕೆ ಒಳಗಾದ ಉದಾಹರಣೆಗಳೇ ಇರಲಿಲ್ಲ ಎಂದಿದ್ದಾರೆ.
ಇಲ್ಲಿನ ಶಾಸಕರು, ಸಚಿವರು ಹಾಗೂ ಆರ್ಥಿಕ ಸಲಹೆಗಾರರು ಏನು ಮಾಡುತ್ತಿದ್ದರೆಂದು ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಮತದಾರರು ತಮಗೆ ತಾವೇ ಶಾಪ ಹಾಕಿಕೊಳ್ಳುತ್ತಾ ಧೂಳಿನಲ್ಲಿ, ಗುಂಡಿ ಬಿದ್ದ ರಸ್ತೆಯಲ್ಲಿ, ಕನಿಷ್ಠ ಸೌಲಭ್ಯಗಳು ಇಲ್ಲದ ವ್ಯವಸ್ಥೆಯಲ್ಲಿ ಬದುಕುವಂತಾಗಿದೆ.
ಕೇಂದ್ರ ಸರಕಾರವನ್ನು ದೋಷಿಸುತ್ತ, ಸುಳ್ಳಿನ ಕಂತೆ ಬಿಚ್ಚುತ್ತಾ, ಘೋಷಿಸಿದ ಯೋಜನೆಗಳ ಅನುಷ್ಠಾನಕ್ಕೆ ಹಣಕಾಸನ್ನು ಹೇಗೆ ಕ್ರೂಢೀಕರಿಸಲಾಗುವುದು ಎಂಬುದನ್ನು ಮರೆಮಾಚುತ್ತ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಸ್ತುತಪಡಿಸಿರುವ ಇದು ಹಾರಿಕೆಯ, ತೋರಿಕೆಯ ಬಜೆಟ್. ಇಲ್ಲಿ ಘೋಷಿಸಲಾಗಿರುವ ಭರವಸೆಗಳನ್ನು ನೋಡಿದರೆ ಇದು ಸಿದ್ದರಾಮಯ್ಯನವರ ಕೊನೆಯ ಬಜೆಟ್ ಹಾಗೂ ಅವರು ಮುಖ್ಯಮಂತ್ರಿ ಸ್ಥಾನದಿಂದ ಶೀಘ್ರದಲ್ಲಿ ನಿರ್ಗಮಿಸಲಿದ್ದಾರೆ ಎಂಬುದರ ಸೂಚನೆಯಂತಿದೆ.ಎಂದು ಸಿ.ವಿ.ಚಂದ್ರಶೇಖರ್ ಎಂದು ಹೇಳಿರುವರು