ಹೊಸಶಕೆ ನ್ಯೂಸ್-ಕೊಪ್ಪಳ : ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ!, ಬಲ್ಡೋಟ ಕಾರ್ಖಾನೆ ತೊಲಗಲಿ! ಕೊಪ್ಪಳ ಉಳಿಯಲಿ!, ಬನ್ನಿ ಕೊಪ್ಪಳ ಪರಿಸರ ರಕ್ಷಣೆಗೆ ಮುಂದಾಗೋಣ !, ಬಲ್ಡೋಟ ಕಾರ್ಖಾನೆ ತೊಲಗಿಸಿ! ತೊಟ್ಟಿಲು ತೂಗೋಣ ! ಎಂಬ ಘೋಷವಾಕ್ಯದಡಿ ಬಲ್ಡೋಟ ಕಾರ್ಖಾನೆ ಸ್ಥಾಪನೆಯ ವಿರುದ್ಧ ಹಲವು ಹೋರಾಟಗಳನ್ನು ನಡೆಸಿಕೊಂಡು ಬಂದಿರುವ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿಯು ಮುಂದಿನ ಹಂತದ ಹೋರಾಟ ರೂಪಿಸಲು ಪರಿಸರ ಸಂರಕ್ಷಣಾ ಸಭೆಯನ್ನು ಏರ್ಪಡಿಸಿದೆ.
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮುಖಂಡರು, ಪ್ರಗತಿಪರ ಹೋರಾಟಗಾರರಾದ ಅಲ್ಲಮಪ್ರಭು ಬೆಟ್ಟದೂರು, ಬಸವರಾಜ ಪೂಜಾರ ಹಾಗೂ ಸಂಘಟನೆಯ ಮೂಖಂಡರು ನಾಗರಿಕರಿಗೆ, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳಿಗೆ ಮಾಡಿಕೊಂಡಿರುವ ಮನವಿಯಲ್ಲಿ ಮುಂದಿನ ಹೋರಾಟದಲ್ಲಿ ತಾವೆಲ್ಲರೂ ಭಾಗಿಯಾಗುವ, ಸಲಹೆ, ಸೂಚನೆ ನೀಡುವ ಮತ್ತು ಆಂದೋಲನದಲ್ಲಿ ಸಾಮೂಹಿಕ ನಾಯಕತ್ವ ವಹಿಸಿ, ಪ್ರತಿಯೊಬ್ಬ ನಗರದ ನಾಗರಿಕರನ್ನು ಈ ಹೋರಾಟಕ್ಕೆ ಕರೆ ತರಲು ವಿನಂತಿಸಿದ್ದಾರೆ.
ಪರಿಸರ, ಆರೋಗ್ಯದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ತುರ್ತು ಕಾರ್ಯಯೋಜನೆ ರೂಪಿಸಲು ದಿನಾಂಕ: ಮೇ. 4, ರವಿವಾರ ಬೆಳಿಗ್ಗೆ 09-30ಕ್ಕೆ ನಗರದ ಮಹಾಂತಯ್ಯನಮಠ ಕಲ್ಯಾಣ ಮಂಟಪ (ಲಕ್ಷ್ಮೀ ಚಿತ್ರಮಂದಿರ ಹತ್ತಿರ)ದಲ್ಲಿ ಸಭೆ ಕರೆಯಲಾಗಿದೆ. ತಪ್ಪದೆ ತಾವು ಈ ಸಭೆಗೆ ಆಗಮಿಸಲು ವಿನಂತಿಸಿದ್ದು, ಕೊಪ್ಪಳ ನಗರ, ಭಾಗ್ಯನಗರ ಹಾಗೂ ಸುತ್ತಲಿನ ಗ್ರಾಮಗಳ ಒಂದು ಲಕ್ಷ ಐವತ್ತು ಸಾವಿರ ಜನರ ಜೀವಕ್ಕೆ ಸವಾಲೊಡ್ಡಿ, ತಾನು ಅಭಿವೃದ್ಧಿಯಾಗಲು ಕೊಪ್ಪಳ ಭವಿಷ್ಯವನ್ನೇ ಮಂಕಾಗಿಸುವ, ಇಲ್ಲಿ ಬದುಕು ಕಟ್ಟಿಕೊಂಡವರ ಆರೋಗ್ಯ ಹಾಳು ಮಾಡುವ ಮೊಂಡಾಟಕ್ಕೆ ಕಂಪನಿ ಮುಂದಾಗಿದೆ. ಬಲ್ಡೋಟ ಕಾರ್ಖಾನೆ ಸ್ಥಾಪಿಸಿದರೆ ಕೊಪ್ಪಳವನ್ನು ಸಂಪೂರ್ಣವಾಗಿ ಇಲ್ಲಿಂದ ಸ್ಥಳಾಂತರಿಸಬೇಕಾಗುತ್ತದೆ. ಇದು ಕಂಪನಿಯಿಂದಾಗಲೀ, ಸರ್ಕಾರದಿಂದಾಗಲೀ ಸಾಧ್ಯವೇ? ಎಂದು ಪರಿಸರ ಸಂತಕ್ಷಣಾ ಸಭೆಯ ಆಮಂತ್ರಣದಲ್ಲಿ ಪ್ರಶ್ನಿಸಿರುವರು.
ನಗರದ ಜನರು ಈ ಬಾಧೆಯಿಂದ ಪರಿತಪಿಸುತ್ತಿರುವಾಗಲೇ ಫೆಬ್ರವರಿ 14, 2025ರಂದು ಬೆಂಗಳೂರಿನಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಬಲ್ಡೋಟ ಬಿ.ಎಸ್.ಪಿ.ಎಲ್ ಕಂಪನಿ 54 ಸಾವಿರ ಕೋಟಿ ಹೂಡಿಕೆಗೆ ಅನುಮತಿ ಪಡೆದುಕೊಂಡಾಗಲೇ ಕೊಪ್ಪಳಕ್ಕೆ ಬರಸಿಡಿಲು ಬಡಿದಂತಾಯಿತು. ತಕ್ಷಣವೇ ಕಾರ್ಖಾನೆ ವಿಸ್ತರಣೆಗೆ ಮುಂದಾದ ಬಲ್ಡೋಟ 20 ಸಾವಿರ ಉದ್ಯೋಗ, 20 ಗ್ರಾಮಗಳ ದತ್ತು ಎಂದು ಹಳ್ಳಿ ಜನರಲ್ಲಿ ಭ್ರಮೆಯನ್ನು ಬಿತ್ತಲು ಮುಂದಾಗಿದೆ.
ಇದನ್ನು ವಿರೋಧಿಸಿ ನಮ್ಮ ಆಂದೋಲನ ಸರಣಿ ಹೋರಾಟ, ಕಾರ್ಯಕ್ರಮ ರೂಪಿಸಿ ಬೀದಿಗಿಳಿಯಿತು. ಇದೇ ಸಂದರ್ಭದಲ್ಲಿ ದೂಳಿನಿಂದ ಬೇಸತ್ತ ಜನರಿಗೆ ಆಸರೆಯಾಗಿ ಬಂದು ಬಲ್ಡೋಟ ಕಂಪನಿ ವಾಪಸ್ ಕಳಿಸಲು ಗವಿ ಶ್ರೀಗಳು ಮುಂದಾದರು. ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ, ಕೊಪ್ಪಳ ಪರಿಸರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸಾವಿರಾರು ಜನರು ಬೀದಿಗಿಳಿದು ಕೊಪ್ಪಳ ಬಂದ್ ಆಚರಿಸುವ ಮೂಲಕ ಬಲ್ಡೋಟ ಬಿ.ಎಸ್.ಪಿ.ಎಲ್ ಬೇಡವೇ ಬೇಡ! ಕೊಪ್ಪಳ ನಗರ ಮತ್ತೊಂದು ತೋರಣಗಲ್ ಆಗಕೂಡದು! ಎಂದು ತೊಟ್ಟಿಲು ತೂಗುವ ಕೈಗಳು ಹೆಚ್ಚಾಗಲಿ! ಕಾರ್ಖಾನೆ ವಾಪಸ್ ಹೋಗಲಿ! ಎನ್ನುವ ಕರೆಗೆ ಗಟ್ಟಿಯಾಗಿ ನಿಂತು ದನಿಗೂಡಿಸಿದ್ದನ್ನು ಸ್ಮರಿಸಬಹುದು.
== ನಗರಕ್ಕೆ ಹೊಂದಿಕೊಂಡು ಬೆಳವಿನಾಳ, ಬಸಾಪುರ, ಹಾಲವರ್ತಿ ಈ ಮೂರು ಗ್ರಾಮಗಳ 1034 ಎಕರೆ ರೈತರ ಭೂಮಿಯನ್ನು ಕೆ.ಐ.ಎ.ಡಿ.ಬಿ ಮೂಲಕ ಬಲವಂತದಿAದ ವಶಪಡಿಸಿಕೊಂಡ ಬಲ್ಡೋಟ ಎಂ.ಎಸ್.ಪಿ.ಎಲ್ ಕಂಪನಿಯಿಂದ, ಸ್ಪಾಂಜ್ ಐರನ್, ಪಲ್ಲೆಟ್ ತಯಾರಿಕೆಯನ್ನು ಕಳೆದ 13 ವರ್ಷಗಳ ಹಿಂದೆ ಆರಂಭಿಸಿದ ಕಾರಣ ಒಂದು ಚಿಮಣಿಯಿಂದ ಉಗುಳುವ ಕಪ್ಪು ದೂಳಿನಿಂದ ಕೊಪ್ಪಳದ ಪುರ್ವ ಭಾಗಬಾಧಿತವಾಗಿವೆ. ಇಲ್ಲಿನ ಜನರು ಗೊತ್ತಿಲ್ಲದಂತೆ ಮೆಲ್ಲನೆ ಈ ದೂಳು ಉಸಿರಾಡಿ ರೋಗ ಬಾಧೆಗೆ ತುತ್ತಾಗುತ್ತಿದ್ದಾರೆ : ಅಲ್ಲಮಪ್ರಭು ಬೆಟ್ಟದೂರ, ಕೊಪ್ಪಳ ಬಚಾವೋ ಆಂದೋಲ ಸಮಿತಿ ಮುಖಂಡರು, ಕೊಪ್ಪಳ==