ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ
ಹೊಸಶಕೆ ನ್ಯೂಸ್-ಕೊಪ್ಪಳ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಂಘಟನೆಯ ನೂತನ ಜಿಲ್ಲಾ ಪ್ರತಿನಿಧಿಯಾಗಿ ಕೊಪ್ಪಳದ ಗುರುರಾಜ ಜೋಶಿ 140 ಮತಗಳ ಅಂತರದಿಂದ ಗೆಲುವು ಪಡೆದು ಭಾನುವಾರ ಆಯ್ಕೆಯಾಗಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಭಾನುಪ್ರಕಾಶ ಶರ್ಮಾ ಬಣದಿಂದ ಗುರುರಾಜ ಜೋಶಿ ಹಾಗೂ ಎಸ್. ರಘುನಾಥ್ ಬಣದಿಂದ ಪ್ರಾಣೇಶ ಮಾದಿನೂರು ಅವರು ಜಿಲ್ಲಾಪ್ರತಿನಿಧಿ ಸ್ಥಾನಕ್ಕೆ ಕಣಕ್ಕಿಳಿದಿದ್ದರು. ಗುರುರಾಜ ಅವರಿಗೆ 449 ಮತ್ತು ಪ್ರಾಣೇಶ್ ಅವರಿಗೆ 309 ಮತಗಳು ಲಭಿಸಿದವು. 29 ಮತಗಳು ತಿರಸ್ಕೃತವಾದವು.
ಮೊದಲ ಬಾರಿಗೆ ಜಿಲ್ಲೆಯಲ್ಲಿ ನಡೆದ ಮತದಾನದಲ್ಲಿ ಒಟ್ಟು 1,190 ಮತದಾರರು ಇದ್ದರು. ಇದರಲ್ಲಿ 787 ಮತಗಳು ಚಲಾವಣೆಯಾದವು. ಇಲ್ಲಿನ ಸರ್ಕಾರಿ ನೌಕರರ ಭವನದ ಎದುರು ಇರುವ ಬ್ರಾಹ್ಮಣ ಸದಾಚಾರ ಸದನದಲ್ಲಿ ಭಾನುವಾರ ಬೆಳಿಗ್ಗೆ ಎಂಟು ಗಂಟೆಯಿಂದ ಮಧ್ಯಾಹ್ನ ನಾಲ್ಕು ಗಂಟೆ ತನಕ ಮತದಾನ ನಡೆಯಿತು. ಜಿಲ್ಲಾಕೇಂದ್ರ ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಮತದಾರರು ಹಕ್ಕು ಚಲಾಯಿಸಿದರು.ಸಂಜೆ ಆರು ಗಂಟೆ ಸುಮಾರಿಗೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಗುರುರಾಜ ಜೋಶಿ ಬಣದವರು ಸಂಭ್ರಮಾಚರಣೆ ಮಾಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಗುರುರಾಜ ’ಸಮಾಜದ ಎಲ್ಲ ಹಿರಿಯರ ಆಶೀರ್ವಾದದಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿದೆ. ನಮ್ಮ ರಾಜ್ಯ ಸಮಿತಿಯ ಮುಖಂಡರು ನೀಡುವ ಸೂಚನೆಯನ್ವಯ ಜಿಲ್ಲೆಯಲ್ಲಿ ಸಮುದಾಯದ ಸಂಘಟನೆ ಹಾಗೂ ಜನರ ಅಭಿವೃದ್ಧಿಗೆ ಕೆಲಸ ಮಾಡುವೆ’ ಎಂದು ಹೇಳಿದರು.
ನೆರೆಯ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಜಿಲ್ಲಾಪ್ರತಿನಿಧಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಅಲ್ಲಿನ ಮತದಾರರಿಗೆ ಹಕ್ಕು ಚಲಾಯಿಸಲು ಈ ಬಾರಿ ಇಲ್ಲಿಯೇ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.