‘ಅಂಬೇಡ್ಕರ್’ ಭಾರತೀಯರಿಗೆ ನೀಡಿದ ಕೊಡುಗೆ ಅಪಾರ. ಭಾರತದ ಇತಿಹಾಸದ ಪುಟಗಳಲ್ಲಿ ಅಂಬೇಡ್ಕರ್ ಅವರದು ಮರೆಯಲಾಗದ ಇತಿಹಾಸ. ತನ್ನ ಬದುಕನ್ನೇ ಭಾರತಕ್ಕೆ ಅರ್ಪಣೆ ಮಾಡಿ, ಭಾರತವು ಜಗತ್ತಿನಲ್ಲಿ ಮಾದರಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಬೆಳಗುವಂತೆ ಮಾಡಿದ ನಿಜವಾದ ಭಾಗ್ಯವಿಧಾತ.
ಭಾರತದ ಎದೆ ಬಡಿತ, ಭಾರತೀಯರ ನಾಡಿ ಮಿಡಿತ, ಮಕ್ಕಳ, ಮಹಿಳೆಯರ, ಧೀನ ದಲಿತರ, ಅಲ್ಪಸಂಖ್ಯಾತರ, ಸರ್ವಧರ್ಮೀಯರ ಸುಪ್ರಭಾತ. ಜ್ಞಾನಕ್ಕೆ ಕೀರ್ತಿ, ಆರ್ಥಿಕತೆಗೆ ಸ್ಪೂರ್ತಿ, ನೀರಾವರಿಗೆ ನೆರವು, ಶಿಕ್ಷಣಕ್ಕೆ ಶಕ್ತಿ, ರಾಜಕೀಯಕ್ಕೆ ಬಲ, ಅಸಾಯಕರಿಗೆ ಛಲ, ಮಹಿಳೆಯರಿಗೆ ಮುಕ್ತಿ, ಹೋರಾಟಕ್ಕೆ ಮಾರ್ಗದರ್ಶಿಯಾಗಿರುವುದು ಈ ‘ಅಂಬೇಡ್ಕರ್’ ಎಂಬ ಪದ.
‘ಅಂಬೇಡ್ಕರ್’ ಎಂಬ ಪದ ಬರಿ ಹೆಸರಲ್ಲ ನಮ್ಮ ಉಸಿರು. ನಿತ್ಯವೂ ನಾವೆಲ್ಲ ಸ್ಮರಣೆ ಮಾಡುವುದೇ ಅಂಬೇಡ್ಕರ್ ಎಂಬ ನಮ್ಮ ಪಾಲಿನ ನಿಜವಾದ ದೇವರನ್ನು. ಆಯಸ್ಸು, ಆರೋಗ್ಯ, ಶಾಂತಿ, ನೆಮ್ಮದಿಗಾಗಿ ದೇವರ ಸಹಸ್ರನಾಮ ಜಪಿಸುವಂತೆ ನಾವು ಅಂಬೇಡ್ಕರ್ ಸಹಸ್ರನಾಮ ಸ್ಮರಣೆ, ಅಂಬೇಡ್ಕರ್ ಕೋಟಿ ಜಪ ಮಾಡುತ್ತಿದ್ದೇವೆ. ಅಂಬೇಡ್ಕರ್ ನಾಮದ ಜಪದ ಫಲವಾಗಿ ನಮಗೆ ಎಲ್ಲವೂ ದೊರಕಿದೆ. ಶೂನ್ಯದಿಂದ ಆಕಾಶದ ಎತ್ತರಕ್ಕೆ ಬೆಳೆದು ನಿಲ್ಲುವ ಶಕ್ತಿ ದೊರಕಿದೆ. ಸಾಮಾನ್ಯರು ಅಸಮಾನ್ಯರಾಗಿ, ಅಬಲೆಯರು ಸಬಲೆಯರಾಗಿ, ದುರ್ಬಲರು ಪ್ರಬಲರಾಗಿ, ನಿರ್ಗತಿಕರು ಪ್ರಗತಿಕಾರರಾಗಿ, ಅಸಮಾನತೆ ಬೇಲಿಯನ್ನು ಕಿತ್ತೆಸೆದು ಸಮಾನತೆಯ ಸಮಾಜ ಸಾಕಾರ ಆಗುವಂತೆ ಮಾಡಿದ್ದೆ ಅಂಬೇಡ್ಕರ್.
ಅಂಬೇಡ್ಕರ್ ಜಪ ಮಾಡಿದ ಪ್ರತಿಯೊಬ್ಬರಿಗೂ ಸಕಲ ಸೌಭಾಗ್ಯ ದೊರೆಯಲಿದೆ. ಅದಕ್ಕಾಗಿ ಅಂಬೇಡ್ಕರ್ ಎಂಬ ಪದವನ್ನು ಲಕ್ಷಕ್ಕೂ ಹೆಚ್ಚು ಬಾರಿ ಬರೆದು ಅಂಬೇಡ್ಕರ್ ಅವರ ಭಾವಚಿತ್ರ ರಚಿಸಲಾಗಿದೆ. ಈ ಚಿತ್ರವನ್ನು ನೋಡಿದ ಪ್ರತಿಯೊಬ್ಬರಿಗೂ ಜೀವನದಲ್ಲಿ ಛಲ, ಬಲ, ಸ್ಪೂರ್ತಿ ಸಿಕ್ಕೆ ಸಿಗುತ್ತದೆ. ಸಂವಿಧಾನ ಎಂದಾಗ ನೆನಪಾಗುವುದೇ ಅಂಬೇಡ್ಕರ, ಅಶೋಕ ಚಕ್ರವರ್ತಿ ಎಂದಾಗ ಬರುವುದೇ ಅಂಬೇಡ್ಕರ್ ಅವರ ನೆನಪು, ಬುದ್ಧ ಎಂದಾಗ ಕಣ್ಮುಂದೆ ಬರುವುದೇ ಅಂಬೇಡ್ಕರ್ ಅವರ ಭಾವಚಿತ್ರ. ಈ ಹಿನ್ನೆಲೆಯಲ್ಲಿ ಈ ಭಾವಚಿತ್ರ ರಚನೆ ಮಾಡಲಾಗಿದೆ ಎಂದು ಚಿತ್ರಕಲಾ ಶಿಕ್ಷಕರಾದ ಶ್ರೀ ತಿರುಪತಿ ಶಿವನಗುತ್ತಿ ಹೇಳುತ್ತಾರೆ.