ಹೊಸಶಕೆ ನ್ಯೂಸ್-ಕನಕಗಿರಿ: ಜಿಲ್ಲೆಯಲ್ಲಿನ ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಭೆ ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕನಕಪುರ, ತಿಪ್ಪನಾಳ, ಹನುಮನಾಳ ಗ್ರಾಮ ಸೇರಿದಂತೆ ನಾಲ್ಕೈದು ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತುರ್ತು ಸಭೆ ಕರೆಯಲಾಗಿದ್ದು, ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಮಾನಾಂತರ ಜಲಾಶಯದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದಿನ ಶಾಸಕರು ಮಾಡಿಸಿರುವ ಸರ್ವೇಯಿಂದ ಕನಕಗಿರಿ ವಿಧಾನಸಭಾ ಕ್ಷೇತ್ರಕ್ಕೆ ತೊಂದರೆ ಆಗಲಿದೆ ಎಂಬುದನ್ನು ಸರ್ಕಾರದ ಗಮನಕ್ಕೆ ತಂದಿದ್ದೇನೆ. ಈ ಹಿಂದೆ ನಾನು ಮಾಡಿಸಿದ್ದ ಸರ್ವೇಯನ್ನು ಪರಿಗಣಿಸುವಂತೆ ಹೇಳಿದ್ದೇನೆ ಎಂದ ಅವರು, ತೋಟಗಾರಿಕೆ ಪಾರ್ಕ್ ವಿಚಾರದಲ್ಲಿ ಕಳೆದ ಶಾಸಕರು ಏನು ಕೆಲಸ ಮಾಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. ನನ್ನ ಸತತ ಪ್ರಯತ್ನದಿಂದಾಗಿ ತೋಟಗಾರಿಕೆ ಪಾರ್ಕ್ ವಿಚಾರವನ್ನು ಇದೀಗ ಸಚಿವ ಸಂಪುಟಕ್ಕೆ ತರುತ್ತಿದ್ದೇವೆ. ಸುಮ್ಮನೆ ತಿಪ್ಪೆ ಸಾರುವ ಕೆಲಸ ಆಗಬಾರದು ಎಂದು ಹಿಂದಿನ ಬಿಜೆಪಿ ಶಾಸಕರ ಹೆಸರು ಹೇಳದೇ ಸಚಿವ ಶಿವರಾಜ್ ತಂಗಡಗಿ ಛೇಡಿಸಿದರು.
ಅಂದಾಜು 22 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ: ಸಚಿವ ಶಿವರಾಜ್ ತಂಗಡಗಿ ಅವರು, ಕನಕಗಿರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ರೂ.2.22 ಕೋಟಿ ವೆಚ್ಚದಲ್ಲಿ ಈಚನಾಳ ಗ್ರಾಮದ ರಸ್ತೆ ಡಾಂಬರೀಕರಣ, ರೂ.5.23 ಕೋಟಿ ವೆಚ್ಚದಲ್ಲಿ ಚಿಕ್ಕಮಾದಿನಾಳದಿಂದ ಮುಸಲಾಪುರ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿ, ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ರೂ. 1 ಕೋಟಿ ವೆಚ್ಚದಲ್ಲಿ ಕನಕಗಿರಿ- ಕೊಪ್ಪಳ ಮುಖ್ಯರಸ್ತೆಯಿಂದ ಹುಡೇಜಾಲಿ ಗ್ರಾಮದವರೆಗಿನ ರಸ್ತೆ ಸುಧಾರಣೆ, ರೂ.1.70 ಕೋಟಿ ವೆಚ್ಚದಲ್ಲಿ ಕನಕಗಿರಿ- ತಾವರಗೇರಾ ಮುಖ್ಯರಸ್ತೆಯಿಂದ ಹನುಮನಾಳ ಗ್ರಾಮದ ರಸ್ತೆ ಅಭಿವೃದ್ಧಿ ಕಾಮಗಾರಿ, ತಲಾ 30 ಲಕ್ಷ ವೆಚ್ಚದಲ್ಲಿ ಶ್ರೀ ಭಗಿರಥ ಮಹರ್ಷಿ ಸಮುದಾಯ ಭವನ ಕಟ್ಟಡ, ಶ್ರೀ ಚನ್ನಬಸವೇಶ್ವರ ಸಮುದಾಯ ಭವನ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಸಮಾನಾಂತರ ಜಲಾಶಯದ ವಿಚಾರದಲ್ಲಿ ಆಂಧ್ರ, ತೆಲಂಗಾಣ ಹಾಗೂ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಒಟ್ಟಿಗೆ ಸೇರಿ ಚರ್ಚೆ ನಡೆಸಬೇಕಿದೆ. ಮೂರು ರಾಜ್ಯಗಳ ಒಂದು ನಿರ್ಧಾರ ಕೈಗೊಳ್ಳಬೇಕಿದೆ, ಇನ್ನೂ ಕನಕಗಿರಿ ಉತ್ಸವವನ್ನು ನಾವು ರದ್ದು ಮಾಡಿಲ್ಲ. ಈ ಬಗ್ಗೆ ಕ್ಷೇತ್ರದ ಹಿರಿಯರ ಜತೆ ಚರ್ಚೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುವುದು : ಶಿವರಾಜ್ ತಂಗಡಗಿ, ,ಜಿಲ್ಲಾ ಉಸ್ತುವಾರಿ ಸಚಿವರು.