* ಕೊಪ್ಪಳ ಜಿಲ್ಲೆಯ ಉದ್ಯಮ ಹಾಗೂ ಉದ್ಯೋಗಾವಕಾಶಗಳು- ಅಭಿವೃದ್ಧಿ ಗೋಷ್ಠಿ
ಹೊಸಶಕೆ ನ್ಯೂಸ್-ಗಂಗಾವತಿ: ಕೃಷಿ, ಶಿಕ್ಷಣ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉದ್ಯಮಿಯಾಗಿ ಬೆಳೆಯಲು ಯುವಜನತೆಗೆ ಹೇರಳ ಅವಕಾಶಗಳಿದ್ದು, ಪ್ರಾಮಾಣಿಕತೆ, ಶ್ರದ್ಧೆ, ಬದ್ದತೆಯಿಂದ ಕೆಲಸಮಾಡಬೇಕು ಎಂದು ವಿದ್ಯಾನಿಕೇತನ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಎನ್. ಸೂರಿಬಾಬು ಹೇಳಿದರು.
ಪಂಚಾಕ್ಷರಿ ಹಿರೇಮಠ ಮಹಾಮಂಟಪದಲ್ಲಿ ಕ್ಷೇತ್ರದ ಮಾಜಿ ಶಾಸಕ ಅಜಾತ ಶತ್ರು ದಿ. ಶ್ರೀರಂಗದೇವರಾಯಲು ಹೆಸರಿನಲ್ಲಿ ಇಲ್ಲಿನ ಜೂನಿಯರ್ ಕಾಲೇಜು ಮೈದಾನದಲ್ಲಿ ನಿರ್ಮಿಸಲಾಗಿದ್ದ ವೇದಿಕೆಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಭಿವೃದ್ಧಿ ಗೋಷ್ಠಿಯಲ್ಲಿ ‘ಕೊಪ್ಪಳ ಜಿಲ್ಲೆಯ ಉದ್ಯಮ ಹಾಗೂ ಉದ್ಯೋಗಾವಕಾಶಗಳು’ ಕುರಿತು ಮಾತನಾಡಿದರು.
ಉದ್ಯಮಿಯಾಗುವವರು ಮೊದಲು ಉದ್ಯಮದ ಬಗ್ಗೆ ಅಧ್ಯಯನ, ಪರಿಸರ, ಅವಕಾಶ, ಸಂಪನ್ಮೂಲ ಸದ್ಭಳಕೆ, ಜನರಿಗೆ ಬೇಕಾಗುವ ಅಗತ್ಯತೆ, ಸಮಾಜ, ಮಾರುಕಟ್ಟೆ ಬಗ್ಗೆ ಮೂಲ ಮಾಹಿತಿ ಪಡೆದುಕೊಂಡು ಅದನ್ನು ಅವಕಾಶವಾಗಿ ಪರಿವರ್ತಿಸಿಕೊಳ್ಳಬೇಕು. ಉದ್ಯಮ ಸ್ಥಾಪನೆಗೆ ಹಣವೇ ಮೊದಲು ಬೇಕು ಎನ್ನುವುದು ಎಲ್ಲರ ಲೆಕ್ಕಾಚಾರವಾಗಿದೆ. ಆದರೆ ಹಣ ಮಾತ್ರ ಮುಖ್ಯವಾಗುವುದಿಲ್ಲ. ಸ್ಪಷ್ಟ ಯೋಜನೆ ಮತ್ತು ಸಂಪನ್ಮೂಲ ಕ್ರೋಢಿಕರಣ ಅಗತ್ಯವಾಗಿದೆ ಎಂದರು.
ಹೋಟೆಲ್ ಉದ್ಯಮ ಆರಂಭಿಸಿ ಆನ್ಲೈನ್ ಮೂಲಕ ಊಟ ಸರಬರಾಜು, ಸಿರಿ ಧಾನ್ಯಗಳ ಮಾರಾಟ, ಆನ್ಲೈನ್ಗಳ ಮೂಲಕ ಶಿಕ್ಷಣ, ರಿಯಲ್ ಎಸ್ಟೇಟ್, ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಪ್ರವಾಸೋದ್ಯಮ, ಪರಿಸರಕ್ಕೆ ಹಾನಿಕಾರವಲ್ಲ ಇಟ್ಟಂಗಿ ತಯಾರಿಕೆ ಹೀಗೆ ಸಾಕಷ್ಟು ಅವಕಾಶಗಳು ಇವೆ. ಮನುಷ್ಯನಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ. ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾದ ಯುವಕ ಛಲದಿಂದ ಕೆಲಸ ಮಾಡಿದರೆ ದೊಡ್ಡ ಸಾಧನೆ ಮಾಡಬಹುದು’ ಎಂದು ಹೇಳಿದರು. ಹಿರಿಯ ಪತ್ರಕರ್ತ ಶರಣಬಸಪ್ಪ ಬಾಚಲಾಪೂರ ಅಧ್ಯಕ್ಷ ಭಾಷಣ ಮಾಡಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಕೆ.ನಿಂಗಜ್ಜ ಜಿಲ್ಲೆಯ ಪ್ರವಾಸೋದ್ಯಮ ಸವಾಲು-ಸಾಧ್ಯತೆ ಬಗ್ಗೆ ಉಪನ್ಯಾಸ ನೀಡಿದರು.
ವೇದಿಕೆಯಲ್ಲಿ ಎಸ್.ಕೆ.ಆರ್.ಪಿ.ಯು ಕಾಲೇಜಿನ ಪ್ರಾಚಾರ್ಯ ಪ್ರೊ. ಶಿವಾನಂದ ಮೇಟಿ, ಜಗದೀಶಪ್ಪ ಸಿಂಗನಾಳ, ಲಿಂಗಪ್ಪ ಬೆನಕನಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮರೇಶ ಗೋನಾಳ, ಕರವೇ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಉಮೇಶ ಸಿಂಗನಾಳ, ಪತ್ರಕರ್ತ ಸಂತೋಷ ದೇಶಪಾಂಡೆ, ದೇವರಾಜ, ವಸಂತಕುಮಾರ ಪಾಲ್ಗೊಂಡಿದ್ದರು. ಪತ್ರಕರ್ತ ಪ್ರಸನ್ನ ದೇಸಾಯಿ ನಿರೂಪಿಸಿದರು. ಮಲ್ಲಿಕಾರ್ಜುನ ಆಡೂರ ಸ್ವಾಗತಿಸಿದರು. ಬಸವರೆಡ್ಡಿ ಆಡೂರ ವಂದಿಸಿದರು.
==ಹತ್ತನೇ ತರಗತಿಯಲ್ಲಿ ಅನುತ್ತೀರ್ಣನಾದ ಯುವಕನೂ ಛಲದಿಂದ ಉದ್ಯಮಿಯಾಗಬಹುದು. ಯುವಕರು ಸಣ್ಣ ಕೆಲಸವನ್ನೂ ಗೌರವಿಸಬೇಕು. ವಿದ್ಯಾವಂತರೆಂದು ಕೆಲಸ ಸಣ್ಣತನದಿಂದ ನೋಡಬಾರದು : ಎನ್.ಸೂರಿಬಾಬು, ಅಧ್ಯಕ್ಷರು, ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಗಳು ಗಂಗಾವತಿ.