ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಕವಿಗಳು, ಸಾಹಿತಿಗಳು, ಬರಹಗಾರರು ಸೃಷ್ಟಿಯಾಗಿದ್ದು, ಸಾಧನೆ, ಪ್ರತಿಭೆಯ ಆಧಾರದ ಮೇಲೆ ಅಕಾಡೆಮಿಗಳಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ : ತಂಗಡಗಿ
ಹೊಸಶಕೆ ನ್ಯೂಸ್-ಗಂಗಾವತಿ: ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಂಪ್ರದಾಯ, ಕಲೆ, ವಾಸ್ತುಶಿಲ್ಪದ ರಕ್ಷಣೆ ಪ್ರತಿಯೊಬ್ಬ ಕನ್ನಡಿಗಿನ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡಿಗರು ಸನ್ನದ್ಧರಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು. ‘ರಾಜ್ಯದ ಗಡಿಭಾಗಗಳಲ್ಲಿ ಅನ್ಯ ರಾಜ್ಯಗಳ ಪುಂಡರ ಹಾವಳಿ, ಹಲ್ಲೆ, ಕಿರುಕುಳದಂತಹ ಕೃತ್ಯಗಳು ಹೆಚ್ಚಾಗಿದ್ದು, ನಾಡಿನ ಜನತೆಗಳಾದ ನಾವು ಸಿಡಿದೇಳಬೇಕಿದೆ. ಪುಂಡರ ಕಿರುಕುಳ ಸಹಿಸಿಕೊಂಡು ನಾವು ಸುಮ್ಮನಿದ್ದರೆ, ರಾಜ್ಯದ ಗಡಿ ಪ್ರದೇಶಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ವಿಚಾರದಲ್ಲಿ ಕನ್ನಡಿಗರೆಲ್ಲರೂ ಜಾಗೃತರಾಗಬೇಕು’ ಎಂದರು.
‘ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಕವಿಗಳು, ಸಾಹಿತಿಗಳು, ಬರಹಗಾರರು ಸೃಷ್ಟಿಯಾಗಿದ್ದು, ಸಾಧನೆ, ಪ್ರತಿಭೆಯ ಆಧಾರದ ಮೇಲೆ ಅಕಾಡೆಮಿಗಳಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಭಾಗದ ಸಾಹಿತಿಗಳಿಗೆ ಹೆಚ್ಚು ರಾಜ್ಯೋತ್ಸವ ಪ್ರಶಸ್ತಿಗಳು ನೀಡಲಾಗಿದೆ’ ಎಂದು ತಿಳಿಸಿದರು.
==
‘ಅಂಜನಾದ್ರಿ ಬೆಟ್ಟ ಒಂದು ಪಕ್ಷ, ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲರಿಗೂ ಇದರ ಅಭಿವೃದ್ಧಿ ಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಿ, ಅಭಿವೃದ್ಧಿ ಕಾರ್ಯಗಳಿಗೆ ಮಹತ್ವ ನೀಡಲಾಗುತ್ತದೆ. ಆನೆಗೊಂದಿ ಉತ್ಸವವನ್ನು ಏ.26, 27ರಂದು ಎರಡು ದಿನ ಆಚರಣೆ ಮಾಡಲು ನಿರ್ಧರಿಸಲಾಗಿದೆ’ : ಶಿವರಾಜ ತಂಗಡಗಿ ಜಿಲ್ಲಾ ಉಸ್ತುವಾರಿ ಸಚಿವರು==